ನವದೆಹಲಿ: ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ದಾಖಲೆಗಳನ್ನು ಕಳವು ಮಾಡಿರುವ ಆರೋಪದ ಮೇರೆಗೆ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಗಳನ್ನು ದೆಹಲಿ ಪೊಲೀಸರು ಬಂಧನಕ್ಕೊಳಪಡಿಸಿರುವುದಾಗಿ ಗುರುವಾರ ತಿಳಿದುಬಂದಿದೆ.
ಮೊಹಮ್ಮದ್ ಅಖ್ತರ್ ಬಂಧಿತ ವ್ಯಕ್ತಿಯೆಂದು ಹೇಳಲಾಗುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಅಖ್ರತ್ ಸೇರಿ ಮತ್ತಿಬ್ಬರನ್ನು ಬಂಧನಕ್ಕೊಳಪಡಿಸಿರುವುದಾಗಿ ದೆಹಲಿ ಪೊಲೀಸರು ಹೇಳಿಕೊಂಡಿದ್ದಾರೆ.
ದೆಹಲಿಯ ರಾಜತಾಂತ್ರಿಕ ಪ್ರದೇಶವಾಗಿರುವ ಚಾಣಕ್ಯಪುರಿಯ ಪೊಲೀಸ್ ಠಾಣೆಯಲ್ಲಿ ಅಖ್ತರ್ ಅವರನ್ನು ವಿಚಾರಣೆ ನಡೆಸಲಾಗಿದ್ದು, ಇದೀಗ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ವಿಚಾರಣೆ ವೇಳೆ 48 ಗಂಟೆಗಳೊಳಗಾಗಿ ಭಾರತವನ್ನು ತೊರೆಯುವಂತೆಯೂ ಅಧಿಕಾರಿಗಳು ಸೂಚನೆ ನೀಡಲಾಗಿದ್ದಾರೆಂದು ಹೇಳಲಾಗುತ್ತಿದೆ.
ರಕ್ಷಣಾ ಇಲಾಖೆಯ ದಾಖಲೆಗಳು ಕಳವಾಗಿರುವ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ವಿಚಾರಣೆಗೆ ಹಾಜರಾಗುವಂತೆ ಇದೀಗ ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್ ಅವರಿಗೂ ಸಮನ್ಸ್ ಜಾರಿ ಮಾಡಿದೆ.
ರಕ್ಷಣಾ ಇಲಾಖೆಯ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ರಾಜಸ್ತಾನ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರನ್ನು ಮೌಲಾನಾ ರಂಜಾನ್ ಮತ್ತು ಸುಭಾಷ್ ಜಂಗೀರ್ ಎಂದು ಹೇಳಲಾಗುತ್ತಿದೆ.
ರಂಜಾನ್ ಮತ್ತು ಸುಭಾಷ್ ಇಬ್ಬರೂ ಕಳೆದ ಒಂದೂವರೆ ವರ್ಷದಿಂದಲೂ ಈ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿದ್ದರು. 6 ತಿಂಗಳಿನಿಂದ ಇಬ್ಬರ ಮೇಲೆ ಕಣ್ಗಾವಲಿಸಿರಿದ್ದೆವು. ಇದೀಗ ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ ರಕ್ಷಣಾ ಇಲಾಖೆಯ ಕೆಲಸದ ದಾಖಲೆಗಳು, ಬಿಎಸ್ಎಫ್ ಕಾರ್ಯನಿರ್ವಹಣೆಯ ನಕ್ಷೆಗಳು, ವೀಸಾಗೆ ಸಂಬಂಧ ಪಟ್ಟಂತಹ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿಕೊಂಡಿದ್ದಾರೆ.
ಇಬ್ಬರೂ ರಾಜಸ್ತಾನ ಮೂಲದವರಾಗಿದ್ದು, ಪಾಕಿಸ್ತಾನದ ಐಎಸ್ಐ ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದರು. ಭಾರತದ ರಕ್ಷಣಾ ಇಲಾಖೆಯ ಸಿಬ್ಬಂದಿಗಳು ಹಾಗೂ ಪಾಕಿಸ್ತಾನ ರಾಯಭಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದ ಅವರು ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳ ಬಂಧನ ಹಾಗೂ ವಿಚಾರಣೆ ಬಗ್ಗೆ ಅಪರಾಧ ವಿಭಾಗದ ಅಧಿಕಾರಿಗಳು ಈಗಾಗಲೇ ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಈ ಬಗ್ಗೆ ವರದಿ ನೀಡಿದ್ದಾರೆಂದು ತಿಳಿದುಬಂದಿದೆ.
Advertisement