ಪಾಕ್ ಕಲಾವಿದರ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ಸಲ್ಮಾನ್ ಪಾಕಿಸ್ತಾನಕ್ಕೆ ಹೋಗಲಿ: ಶಿವಸೇನೆ
ನವದೆಹಲಿ: ಪಾಕಿಸ್ತಾನ ಕಲಾವಿದರ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ನಟ ಸಲ್ಮಾನ್ ಖಾನ್ ಅವರು ಪಾಕಿಸ್ತಾನಕ್ಕೇ ವಲಸೆ ಹೋಗಲಿ ಎಂದು ಶಿವಸೇನೆ ಶನಿವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕಿ ಮನಿಷಾ ಕಯಾಂಡೆ ಅವರು, ಪಾಕಿಸ್ತಾನ ಕಲಾವಿದರ ಬೆನ್ನಿಗೆ ನಿಂತು ಬೆಂಬಲ ಸೂಚಿಸುತ್ತಿರುವ ಸಲ್ಮಾನ್ ಖಾನ್ ಅವರಿಗೆ ಸರಿಯಾದ ಪಾಠ ಹೇಳಬೇಕಿದೆ. ಪಾಕಿಸ್ತಾನ ಕಲಾವಿದರ ಮೇಲೆ ಸಲ್ಮಾನ್ ಅವರಿಗೆ ಅಷ್ಟೊಂದು ಪ್ರೀತಿ ಇದೆ ಎಂದಾದರೆ, ಅವರು ಪಾಕಿಸ್ತಾನಕ್ಕೆ ವಲಸೆ ಹೋಗಲಿ ಎಂದು ಹೇಳಿದ್ದಾರೆ.
ಉರಿ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಡುವಂತೆ ಮಾಡಿದ್ದು, ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಕಲಾವಿದರು ಕೂಡಲೇ ಭಾರತವನ್ನು ತೊರೆಯುವಂತೆ (ಎಂಎನ್ ಎಸ್) ಮಹಾರಾಷ್ಟ್ರ ನವನಿರ್ಮಾಣ ಸೇನೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ ಕೂಡ ಪಾಕಿಸ್ತಾನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಿತ್ತು.
ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ನಟ ಸಲ್ಮಾನ್ ಖಾನ್ ಅವರು, ಪಾಕಿಸ್ತಾನ ಕಲಾವಿದರೇನು ಭಯೋತ್ಪದಾರಕರಲ್ಲ. ಕಲೆಗೂ ಭಯೋತ್ಪಾದನೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಕಲೆ ಹಾಗೂ ಭಯೋತ್ಪಾದನೆಯನ್ನು ಸಮಾನ ರೀತಿಯಲ್ಲಿ ನೋಡಬಾರದು. ಪಾಕಿಸ್ತಾನ ಕಲಾವಿದರನ್ನು ಭಯೋತ್ಪಾದನಕರಂತೆ ನೋಡುವುದನ್ನು ನಿಲ್ಲಿಸಬೇಕೆಂದು ಹೇಳಿದ್ದರು.