
ಬದ್ರಕ್: ಒಡಿಶಾದ ಬದ್ರಕ್ ನಲ್ಲಿ ಉಲ್ಬಣಗೊಂಡಿರುವ ಕೋಮು ಗಲಭೆ ಹಿನ್ನಲೆಯಲ್ಲಿ ಹಿಂಸಾಚಾರ ಪೀಡಿತ ಬದ್ರಕ್ ನಲ್ಲಿ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದ್ದು, ಮುಂದಿನ 48 ಗಂಟೆಗಳ ಕಾಲ ಬದ್ರಕ್ ನಲ್ಲಿ ಸಾಮಾಜಿಕ ಜಾಲತಾಣಗಳನ್ನು ಸ್ಥಗಿತಗೊಳಿಸಲಾಗಿದೆ.
ದಶಕಗಳ ಬಳಿಕ ಒಡಿಶಾದ ಬದ್ರಕ್ ನಲ್ಲಿ ಇದೇ ಮೊದಲ ಬಾರಿಗೆ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ರಾಮ, ಸೀತೆ ಕುರಿತಂತೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹರಿದಾಡಿದ ವಿಚಾರ ವ್ಯಾಪಕವಾಗಿ ಹರಿದಾಡಿ ಬದ್ರಕ್ ನಲ್ಲಿ ವ್ಯಾಪಕ ಕೋಮು ಗಲಭೆಗೆ ಕಾರಣವಾಗಿದೆ. ಹಿಂದೂ ಪರ ಸಂಘಟನೆಗಳು ಹಾಗೂ ಅನ್ಯ ಕೋಮಿನ ಯುವಕರ ನಡುವಿನ ಸಂಘರ್ಷದಿಂದಾಗಿ ಬದ್ರಕ್ ನ ಹಲವು ಪ್ರದೇಶಗಳು ಪ್ರಕ್ಷುಬ್ಧಗೊಂಡಿವೆ. ಪ್ರತಿಭಟನಾಕಾರರನ್ನು ಹಿಮ್ಮೆಟಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರಾದರೂ, ಮತ್ತೆ ಹಿಂಸಾಚಾರ ವ್ಯಾಪಕವಾದ ಪರಿಣಾಮ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಯಿತು.
ಅಂತೆಯೆ ನಿನ್ನೆ ಕರ್ಫೂ ಜಾರಿ ಮಾಡಿ ಮುಂದಿನ 48 ಗಂಟೆಗಳ ಕಾಲ ಜಿಲ್ಲೆಯಲ್ಲಿ 144 ಸೆಕ್ಷನ್ ಮುಂದುವರಿಸಲಾಗಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಸ್ಥಗಿತಗೊಳಿಸಲಾಗಿದ್ದು, ಕೇಂದ್ರ ಸರ್ಕಾರ ರವಾನಿಸಿರುವ ಅರೆಸೇನಾ ಪಡೆಗಳ ತುಕಡಿಗಳು ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಪರೇಡ್ ನಡೆಸುತ್ತಿವೆ. ಅಂತೆಯೇ ಧಾಮ್ ನಗರ ಮತ್ತು ಬಸುದೇವಪುರದಲ್ಲಿ ಹಿಂಸೆಚಾರ ತಡೆಯಲು ತುರ್ಚು ಪ್ರಹಾರ ದಳ ಹಾಗೂ ಅಶ್ರುವಾಯು ದಳಗಳನ್ನು ನಿಯೋಜಿಸಲಾಗಿದೆ.
ಭಜರಂಗದಳದ ಕಾರ್ಯಕರ್ತನೋರ್ವ ಶ್ರೀರಾಮನ ಹೊಗಳಿ ಹಾಕಿದ್ದ ಪೋಸ್ಟ್ ವೊಂದಕ್ಕೆ 3 ಮಂದಿ ಅನ್ಯ ಕೋಮಿನ ಯುವಕರು ಅವಹೇಳನಕಾರಿ ಪ್ರತಿಕ್ರಿಯೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಭಜರಂಗದಳ ಕಾರ್ಯಕರ್ತರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಂತೆಯೇ ಈ ವೇಳೆ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಹಿಂಸಾಚಾರದಿಂದಾಗಿ ಹಲವು ಸರ್ಕಾರಿ ಆಸ್ತಿ-ಪಾಸಿಗಳಿಗೆ ನಷ್ಟವಾಗಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಬದ್ರಕ್ ನ ಪ್ರಮುಖ ಮುಖ್ಯ ರಸ್ತೆಗಳಲ್ಲಿ ಟೈರ್ ಗೆ ಬೆಂಕಿ ಹಚ್ಚಲಾಗಿದ್ದು, ನಗರದಾದ್ಯಂತ ಪ್ರಕ್ಷುಬ್ದ ವಾತಾವರಣ ನೆಲೆಸಿದೆ.
Advertisement