ಮುಜಾಫರ್ ನಗರ್(ಉ.ಪ್ರ): ಉಗ್ರಗಾಮಿ ಚಟುವಟಿಕೆ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶದ ಭಯೋತ್ಪಾದಕ ವಿರೋಧಿ ಪಡೆ ಇಂದು ಮುಜಾಫರ್ ನಗರದ ಕುಟೆಸರಾ ಗ್ರಾಮದಲ್ಲಿ ಬಾಂಗ್ಲಾದೇಶದ ವ್ಯಕ್ತಿಯನ್ನು ಬಂಧಿಸಿದೆ.
ಶಂಕಿತನನ್ನು ಅಬ್ದುಲ್ಲಾ ಎಂದು ಗುರುತಿಸಲಾಗಿದ್ದು ಆತ ನಕಲಿ ಗುರುತುಪತ್ರವನ್ನು ಹಂಚಿ ಇತರ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ.
ಅಬ್ದುಲ್ಲಾ ಬಾಂಗ್ಲಾದೇಶದ ಭಯೋತ್ಪಾದಕ ಗುಂಪು ಅನ್ಸರುಲ್ಲಾ ಬಾಂಗ್ಲಾ ತಂಡದ ಜೊತೆ ಸಹವಾಸ ಇಟ್ಟುಕೊಂಡಿದ್ದ. ಕಳೆದೊಂದು ತಿಂಗಳಿನಿಂದ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ವಾಸಿಸುತ್ತಿದ್ದು 2011ರಲ್ಲಿ ಸಹರಾನ್ ಪುರದಲ್ಲಿ ನೆಲೆಸಿದ್ದ.
ಪ್ರಾಥಮಿಕ ತನಿಖೆ ವೇಳೆ, ಅಬ್ದುಲ್ಲಾ ನಕಲಿ ಗುರುತು ಪತ್ರ ಮತ್ತು ಪಾಸ್ ಪೋರ್ಟ್ ನ್ನು ಬಾಂಗ್ಲಾದೇಶದ ಭಯೋತ್ಪಾದಕರಿಗೆ ನೀಡುತ್ತಿದ್ದ. ಆ ಮೂಲಕ ಅಲ್ಲಿನ ಭಯೋತ್ಪಾದಕರಿಗೆ ಭಾರತದಲ್ಲಿ ನೆಲೆಸಲು ಸಹಾಯ ಮಾಡುತ್ತಿದ್ದ ಎನ್ನಲಾಗುತ್ತಿದೆ.
ಈ ಬಗ್ಗೆ ತನಿಖೆ ನಡೆಸಲು ಭಯೋತ್ಪಾದಕ ವಿರೋಧಿ ಪಡೆ ಮತ್ತೆ ಮೂವರನ್ನು ಕರೆಸಿದೆ.