ಕೊಯಮತ್ತೂರು: 38 ವರ್ಷದ ವ್ಯಕ್ತಿಯೊಬ್ಬರು ಹೊತ್ತಿ ಉರಿಯುತ್ತಿದ್ದ ತನ್ನ ಕಾರಿನಿಂದ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ರಕ್ಷಿಸಿ ತಾವು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಭಾನುವಾರ ತಮಿಳುನಾಡಿನಲ್ಲಿ ನಡೆದಿದೆ.
ಬೆಂಗಳೂರು ಮೂಲದ ಆಭರಣ ಉದ್ಯಮಿ ದಿಲೀಪ್ ಕುಮಾರ್ ಅವರು ಕುಟುಂಬ ಸಮೇತ ಕೊಚ್ಚಿಗೆ ತೆರಳುತ್ತಿದ್ದ ವೇಳೆ ಕಾರಿನ ಎಂಜಿನ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಮದುಕರೈ ಟೋಲ್ ಗೇಟ್ ಬಳಿ ಕಾರು ಹೊತ್ತಿ ಉರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ದಿಲೀಪ್ ಅವರು ಕಷ್ಟಪಟ್ಟು ತಮ್ಮ ಪತ್ನಿ ಹಾಗೂ ಮಕ್ಕಳನ್ನು ಕಾರಿನಿಂದ ಹೊರ ತಳ್ಳಿ ಅವರ ಪ್ರಾಣ ಉಳಿಸಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ತಮ್ಮ ಸೀಟ್ ಬೆಲ್ಟ್ ಬಿಚ್ಚಿಕೊಳ್ಳದೇ ಇರುವುದರಿಂದ ಕಾರಿನಲ್ಲೇ ಸಜೀವ ದಹನವಾಗಿದ್ದಾರೆ.
ಮಹಿಳೆ ಮತ್ತು ಮಕ್ಕಳು ಸುರಕ್ಷಿತವಾಗಿದ್ದು, ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.