ನವದೆಹಲಿ: 71ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ಭಾರತದಲ್ಲಿ ಉಗ್ರರು ದಾಳಿ ನಡೆಸುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿಭದ್ರತೆ ಕೈಗೊಳ್ಳಲಾಗಿದ್ದು, ರಾಜಧಾನಿ ದೆಹಲಿಯಲ್ಲಿ ಎಸ್ಪಿಜಿ, ಎನ್ಎಸ್ಜಿ, ಶಾರ್ಪ್ ಶೂಟರ್, ಕಮಾಂಡರ್, ದೆಹಲಿ ಪೊಲೀಸ್, ಸಿಆರ್ಪಿಎಫ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ದೆಹಲಿ ಭದ್ರತೆಗಾಗಿಯೇ 135 ಕಂಪನಿಗಳನ್ನು ನಿಯೋಜನೆ ಮಾಡಲಾಗಿದ್ದು, ಸುಮಾರು 13500 ಸೇನಾ ಸಿಬ್ಬಂದಿಗಳು ಭದ್ರತಾ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವಾಟ್ ನ ಸುಮಾರು 700ಕ್ಕೂ ಅಧಿಕ ಕಮಾಂಡೋಗಳು ಕೆಂಪುಕೋಟೆ ಮೇಲೆ ಹದ್ದಿನ ಕಣ್ಣಿಟ್ಟಿದ್ದು, 24 ಪರಾಕ್ರಮ ತಂಡಗಳ ಸೈನಿಕರು ಕೆಂಪುಕೋಟೆ ಸುತ್ತಮುತ್ತ ಸರ್ವೇಕ್ಷಣೆ ನಡೆಸುತ್ತಿದ್ದಾರೆ.
ಇನ್ನು ಕೆಂಪುಕೋಟೆಯ ಸುತ್ತಮುತ್ತ 350 ಸಿಸಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಅಂತೆಯೇ ಈ ಪೈಕಿ ಮೋದಿ ಭದ್ರತೆಗೆ 40 ಸಿಸಿ ಕ್ಯಾಮರಾಗಳ ಮೇಲೆ ನಿಗಾ ವಹಿಸಲಾಗಿದೆ. ದೆಹಲಿಯಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪ್ರತೀ ಕಿ.ಮೀಗೆ ಎರಡರಂತೆ ಹೈ ರೆಸಲ್ಯೂಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ, ಶ್ವಾನ ಮತ್ತು ಅಶ್ವದಳಗಳು ದಿನವಿಡೀ ಕೆಂಪುಕೋಟೆಯಲ್ಲಿ ಗಸ್ತು ತಿರುಗಲಿವೆ.
ಒಟ್ಟಾರೆ ಇಂದು ದೇಶದ ಕೇಂದ್ರ ಬಿಂದುವಾಗಿರುವ ದೆಹಲಿ 7 ಸುತ್ತಿನ ಕೋಟೆಯಾಗಿ ಮಾರ್ಪಟ್ಟಿದ್ದು, ದೆಹಲಿ ಮಾತ್ರವಲ್ಲದೇ ದೇಶದ ಪ್ರಮುಖ ನಗರಗಳು ಹಾಗೂ ರಾಜಧಾನಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
Advertisement