ಅಮರಾವತಿ: ಟಾಲಿವುಡ್ ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದು, ತಮ್ಮ ಜೊತೆ ಸೆಲ್ಫಿ ಕ್ಲಿಕ್ಕಿಸಲು ಆಗಮಿಸಿದ್ದ ಅಭಿಮಾನಿಯೋರ್ವನಿಗೆ ಕಪಾಳ ಮೋಕ್ಷ ಮಾಡುವ ಮೂಲಕ ಬಾಲಯ್ಯ ಮತ್ತೆ ಸುದ್ದಿಯಾಗಿದ್ದಾರೆ.
ಆಂಧ್ರ ಪ್ರದೇಶದ ನಂದ್ಯಾಲ್ ಕ್ಷೇತ್ರ ಉಪ ಚುನಾವಣೆ ನಿಮಿತ್ತ ಇಂದು ನಟ ಮತ್ತು ಹಿಂದೂಪುರ ಕ್ಷೇತ್ರ ಟಿಡಿಪಿ ಶಾಸಕರೂ ಕೂಡ ಆಗಿರುವ ಬಾಲಕೃಷ್ಣ ಅವರು ಪಕ್ಷದ ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಆಗಮಿಸಿದ್ದರು. ಈ ವೇಳೆ ಅವರ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾದ. ಜನರ ನೂಕು ನುಗ್ಗಲಿನಿಂದಾಗಿ ಆತ ಬಾಲಯ್ಯ ಅವರ ಮೇಲೆ ಬಿದ್ದ. ಇದರಿಂದ ಕುಪಿತಗೊಂಡ ಬಾಲಯ್ಯ ಹಿಂದೆ ಮುಂದೆ ನೋಡದೆ ಅತನ ಕಪಾಳಕ್ಕೆ ಭಾರಿಸಿದ್ದಾರೆ. ಕೂಡಲೇ ಅಲ್ಲಿಂದ ಅಭಿಮಾನಿ ದೂರ ಸರಿದಿದ್ದು, ಬಳಿಕ ಬಾಲಯ್ಯ ಅಲ್ಲಿಂದ ತೆರಳಿದ್ದಾರೆ.
ಈ ವಿಡಿಯೋವನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಮಾಧ್ಯಮಗಳಲ್ಲಿ ಈ ವಿಡಿಯೋ ಪದೇ ಪದೇ ಪ್ರಸಾರವಾಗುತ್ತಿದ್ದು, ಬಾಲಯ್ಯ ಅವರ ಕಾರ್ಯಕ್ಕೆ ಟೀಕೆಗಳೂ ಕೂಡ ಕೇಳುತ್ತಿವೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರ ಅಭಿಮಾನಿಗಳ ಸಂಘಗಳು ಬಾಲಯ್ಯ ಅವರು ಈ ರೀತಿ ಅಭಿಮಾನಿಗಳಿಗೆ ಹೊಡೆದಿರುವುದು ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಈ ರೀತಿ ಘಟನೆಗಳು ನಡೆದಿವೆ. ಅವರಿಗೆ ಕೊಂಚ ಕೋಪ ಜಾಸ್ತಿ. ಆದರೂ ತಮ್ಮ ಅಭಿಮಾನಿಗಳನ್ನು ಬಾಲಯ್ಯ ತುಂಬಾ ಪ್ರೀತಿಸುತ್ತಾರೆ. ಅಭಿಮಾನಿಗಳು ಕೂಡ ಬಾಲಯ್ಯ ಅವರಿಂದ ಹೊಡೆಸಿಕೊಂಡರೂ ಬೈಗುಳಕ್ಕೆ ತುತ್ತಾದರೂ ಅವರನ್ನೇ ಪ್ರೀತಿಸುತ್ತಾರೆ. ಕನಿಷ್ಟ ಪಕ್ಷ ಹೀಗಾದರೂ ಅವರನ್ನು ಹತ್ತಿರದಿಂದ ನೋಡಿದೆವೆಲ್ಲಾ ಎಂಬ ಅಭಿಮಾನ ಅವರಲ್ಲಿರುತ್ತದೆ ಎಂದು ಭಾವಿಸಿದ್ದಾರೆ. ಹೀಗಾಗಿ ಈ ಘಟನೆಗೆ ಬೇರ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಮನವಿ ಮಾಡಿದ್ದಾರೆ.
ಆದರೆ ಘಟನೆ ಸಂಬಂಧ ನಟ ಬಾಲಕೃಷ್ಣ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement