ಚೆನ್ನೈ: ಎಐಎಡಿಎಂಕೆ ಪಕ್ಷ ವಿಲೀನಗೊಳ್ಳುತ್ತಿದ್ದಂತೆಯೇ ತಮಿಳುನಾಡಿನ ಮಾಜಿ ಸಿಎಂ ಪನ್ನೀರ್ ಸೆಲ್ವಂ, ಹಾಲಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರ ಸಚಿವ ಸಂಪುಟ ಸೇರ್ಪಡೆಗೊಂಡಿದ್ದಾರೆ.
ರಾಜಭವನದಲ್ಲಿ ಪನ್ನೀರ್ ಸೆಲ್ವಂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ಯಪಾಲ ವಿದ್ಯಾಸಾಗರ್ ರಾವ್ ಪ್ರಮಾಣ ವಚನ ಬೋಧಿಸಿದ್ದಾರೆ. ಪನ್ನೀರ್ ಸೆಲ್ವಂ ಅವರೊಂದಿಗೆ ಕೆ ಪಾಂಡಿಯರಾಜನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ತಮಿಳುನಾಡು ಸಂಸ್ಕೃತಿ ಹಾಗೂ ಭಾಷೆ ಇಲಾಖೆ ಸಚಿವರಾಗಿ ಪಾಂಡಿಯರಾಜನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪನ್ನೀರ್ ಸೆಲ್ವಂ ಎಐಎಡಿಎಂಕೆ ಸಂಚಾಲಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.