ಡೇರಾ ಮುಖ್ಯಸ್ಥನ ವಿರುದ್ಧದ ರೇಪ್ ಕೇಸ್ ತೀರ್ಪು: ಮೊಬೈಲ್ ಇಂಟರ್ ನೆಟ್, ಡಾಟಾ ಸೇವೆ ಸ್ಥಗಿತ, 22 ರೈಲುಗಳು ರದ್ದು

ಸ್ವಯಂಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್ ರಹೀಮ್‌ ಸಿಂಗ್‌ ಅವರ ವಿರುದ್ಧದ ಅತ್ಯಾಚಾರ ಪ್ರಕರಣದ....
ಗುರ್ಮೀತ್ ರಾಮ್ ರಹೀಂ ಸಿಂಗ್
ಗುರ್ಮೀತ್ ರಾಮ್ ರಹೀಂ ಸಿಂಗ್
ಚಂಡೀಗಢ: ಸ್ವಯಂಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್ ರಹೀಮ್‌ ಸಿಂಗ್‌ ಅವರ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಶುಕ್ರವಾರ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಹರಿಯಾಣ ಹಾಗೂ ಪಂಜಾಬ್ ನಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸುಮಾರು 15 ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಂತೆ ನಾಳೆ ಹರ್ಯಾಣದ ಪಂಚಕುಲದಲ್ಲಿರುವ ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದು, ಚಂಡೀಗಢ್ , ಪಂಚಕುಲ ಮತ್ತು ಮೊಹಾಲಿಯಲ್ಲಿ ನಿಷೇಧಾಜ್ಞೆ(ಸೆಕ್ಷನ್ 144) ಜಾರಿಗೊಳಿಸಿರುವುದಾಗಿ ಚಂಡೀಗಡ ಪೊಲೀಸ್ ಮಹಾ ನಿರ್ದೇಶಕ ತೇಜಿಂದರ್ ಲೂತ್ರಾ ಅವರು ತಿಳಿಸಿದ್ದಾರೆ.
ಒಂದು ವೇಳೆ ತೀರ್ಪು ರಾಮ್ ರಹೀಮ್ ಸಿಂಗ್ ಅವರ ವಿರುದ್ಧ ಬಂದರೆ ಹಲವು ಭಕ್ತರು ಅವರಿಗಾಗಿ ಸಾಯಲು ಮತ್ತು ಸಾಯಿಸಲು ಸಿದ್ಧರಾಗಿದ್ದು, ಪಂಚಕುಲದ ಸೆಕ್ಟರ್ 23 ರಲ್ಲಿ ಸುಮಾರು 10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. 
ಇತ್ತೀಚಿನ ವರದಿಗಳ ಪ್ರಕಾರ, ಪಂಜಾಬ್, ಹರಿಯಾಣ ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢದಲ್ಲಿ ಮುಂದಿನ 72 ಗಂಟೆಗಳ ಕಾಲ ಮೊಬೈಲ್ ಇಂಟರ್ ನೆಟ್, ಡಾಟಾ ಸೇವೆಯನ್ನು ಸ್ಥಗಿತಗೊಳಿಸುವಂತೆ ಅಧಿಸೂಚನೆ ಹೊರಡಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಈಗಾಗಲೇ 22 ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಮತ್ತು 150 ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಖಚಿತಪಡಿಸಿದೆ.
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರುಮಿತ್‌ ರಾಮ್ ರಹೀಮ್ ಸಿಂಗ್‌ ಅತ್ಯಾಚಾರ ಆರೋಪ ಎದುರಿಸುತ್ತಿದ್ದು, ಪಂಚಕುಲದ ಸಿಬಿಐ ವಿಶೇಷ ನ್ಯಾಯಾಲಯ ನಾಳೆ ಅಂತಿಮ ತೀರ್ಪು ನೀಡಲಿದೆ.
ಪಂಜಾಬ್‌ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಾಂತ144  ಸೆಕ್ಷನ್ ಅನ್ವಯ ನಿಷೇಧಾಜ್ಞೆ ವಿಧಿಸಿದೆ. ಅಲ್ಲದೇ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಸ್ತಾಸ್ತ್ರಗಳ ಸಾಗಾಣೆಯನ್ನು ನಿಷೇಧಿಸಲಾಗಿದೆ.
ಕೇಂದ್ರ ಸರ್ಕಾರ ಕೂಡಾ ಪಂಜಾಬ್‌‌ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅರೆಸೇನಾಪಡೆಗಳನ್ನು ನಿಯೋಜಿಸಿದೆ. ರೇಪ್ ಕೇಸ್ ತೀರ್ಪು ಬಂದ ನಂತರ ಉದ್ಭವಿಸಬಹುದಾದ ಸಮಸ್ಯೆ ಹಿನ್ನೆಲೆಯಲ್ಲಿ ಕರ್ಫ್ಯೂ ವಿಧಿಸುವ ಸಾಧ್ಯತೆಯಿದೆ. 
ತೀರ್ಪಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಗುರುಮಿತ್ ರಾಮ್ ರಹೀಮ್ ಟ್ವೀಟ್ ಮೂಲಕ ತಮ್ಮ ಅನುಯಾಯಿಗಳಿಗೆ ಸಂದೇಶ ರವಾನಿಸಿದ್ದಾರೆ. ''ನಿಸ್ವಾರ್ಥ ಸೇವೆ, ಧ್ಯಾನ ಮತ್ತು ದೃಢ ನಂಬಿಕೆ ಆಧ್ಯಾತ್ಮಿಕತೆಯ ಆಭರಣಗಳು " ಅಂತಾ ಟ್ವೀಟ್ ಮಾಡಿ ಫೇಸ್‌ಬುಕ್ ವಿಡಿಯೋ ಲಿಂಕ್ ನೀಡಿದ್ದಾರೆ.
ಗುರುಮಿತ್ ರಾಮ್ ರಹೀಮ್ ಸಿಂಗ್‌ ಇಬ್ಬರು ಸಾಧ್ವಿಗಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದರೆಂದು 2002ರಲ್ಲಿ ಸಿಬಿಐ ಕೇಸ್‌ ದಾಖಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com