ಆಗ್ರ: ವಿಶ್ವ ಪ್ರಸಿದ್ಧ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಸಮಾಧಿಯೇ ಹೊರತು ದೇವಾಲಯವಲ್ಲ ಎಂದು ಇದೇ ಮೊದಲ ಬಾರಿಗೆ ಭಾರತದ ಪುರಾತತ್ವ ಸಮೀಕ್ಷೆ ಇಲಾಖೆ(ಎಎಸ್ಐ) ನ್ಯಾಯಾಲಯಕ್ಕೆ ಹೇಳಿದೆ.
ತಾಜ್ ಮಹಲ್ ಎಂಬುವುದು ಶಿವನ ದೇವಾಲಯವಾಗಿದ್ದು ಇದರ ಹೆಸರು ತೇಜೋಮಹಲ್ ಎಂದಾಗಿದೆ. ಆದ್ದರಿಂದ ಇಲ್ಲಿ ಹಿಂದೂಗಳಿಗೆ ಪೂಜೆ ಪುನಸ್ಕಾರಗಳಿಗೆ ಅವಕಾಶ ನೀಡಬೇಕು ಎಂದು ಆಗ್ರ ಜಿಲ್ಲಾ ನ್ಯಾಯಾಲಯಕ್ಕೆ 2015ರ ಏಪ್ರಿಲ್ ನಲ್ಲಿ ಆರು ಮಂದಿ ವಕೀಲರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಹಿನ್ನೆಲೆಯಲ್ಲಿ 2015ರಲ್ಲೇ ನ್ಯಾಯಾಲಯ ಸಂಸ್ಕೃತಿ ಸಚಿವಾಲಯಕ್ಕೆ ವರದಿ ನೀಡುವಂತೆ ಸೂಚಿಸಿತ್ತು. ಪ್ರೇಮದ ಕುರುಹಾಗಿರುವ ತಾಜ್ ಮಹಲ್ ನ್ನು ಪುರಾತನ ಹಿಂದೂ ದೇವಾಲಯ ಎಂದು ಸಾಮೀತುಪಡಿಸುವುದಕ್ಕೆ ಪ್ರಬಲ ಸಾಕ್ಷಿ ಇಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಸ್ಪಷ್ಟಪಡಿಸಿದ್ದರು.
ಕಳೆದ ಗುರುವಾರ ಎಎಸ್ಐ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು ಇದರ ವಿಚಾರಣೆಯನ್ನು ಕೋರ್ಟ್ ಮುಂದಿನ ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ.