ನಾಗ್ಪುರ್: ಮಹಾರಾಷ್ಟ್ರ ಸರ್ಕಾರ ಸಾಲ ಮನ್ನಾ ಮಾಡಿದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವವರೆಗೆ ವಿದ್ಯುತ್ ಬಿಲ್ ಸೇರಿದಂತೆ ಇತರೆ ಯಾವುದೇ ಬಾಕಿ ಬಿಲ್ ಗಳನ್ನು ಕಟ್ಟಬೇಡಿ ಎಂದು ಎನ್ ಸಿಪಿ ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರು ಮಂಗಳವಾರ ರೈತರಿಗೆ ಕರೆ ನೀಡಿದ್ದಾರೆ.
ಇಂದು ಕಾಂಗ್ರೆಸ್ ಮತ್ತು ಎನ್ ಸಿಪಿ ಆಯೋಜಿಸಿದ್ದ 'ಹಳ್ಳ ಬೋಲ್' ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಸರ್ಕಾರದಿಂದ ಯಾವುದೇ ಪ್ರಯೋಜನೆ ಆಗದಿದ್ದರೆ ಜನ ಸರ್ಕಾರಕ್ಕೆ ಸಹಕರಿಸಬಾರದು ಎಂದರು.
ಇದೇ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಪವಾರ್ ಅವರು, ಪ್ರತಿಪಕ್ಷಗಳಿಗೆ ಬ್ಲಾಕ್ ಮೇಲ್ ಮಾಡುವುದನ್ನು ಮೊದಲು ನಿಲ್ಲಿಸಿ. ನಾವು ಜನಾದೇಶವನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.
ಬ್ಲಾಕ್ ಮೇಲ್ ಮಾಡುವುದೇ ಜನಾದೇಶದ ಭಾಗವೆಂದು ನೀವು ಭಾವಿಸಿದರೆ ಜನ ನಿಮ್ಮನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದು ಪವಾರ್ ಮಹಾ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.