ಚೆನ್ನೈ: ತಮಿಳುನಾಡು ರಾಜ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಒ. ಪನ್ನೀರ್ ಸೆಲ್ವಂ ಅವರು ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪತ್ರವನ್ನು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಸೋಮವಾರ ಅಂಗೀಕರಿಸಿದ್ದಾರೆ.
ಆಡಳಿತಾರೂಢ ಎಐಎಡಿಎಂಕೆ ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತ ಸ್ನೇಹಿತೆ ವಿ.ಕೆ. ಶಶಿಕಲಾ ನಟರಾಡನ್ ಅವರು ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆಯಾದ ಬಳಿ ಪನ್ನೀರ್ ಸೆಲ್ವಂ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲಕಿಗೆ ಸಲ್ಲಿಕೆ ಮಾಡಿದ್ದರು.
ಸಭೆಯಲ್ಲಿ ಪಕ್ಷದ ಹೆಚ್ಚಿನ ನಾಯಕರು ಶಶಿಕಲಾ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದಾಗಿ ಪನ್ನೀರ್ ಸೆಲ್ವಂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು.
ಈ ರಾಜೀನಾಮೆ ಪತ್ರವನ್ನು ಇಂದು ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಅಂಗೀಕರಿಸಿದ್ದು, ಪರ್ಯಾಯ ವ್ಯವಸ್ಥೆ ಆಗುವವರೆಗೂ ಸ್ಥಾನದಲ್ಲಿ ಮುಂದುವರೆಯುವಂತೆ ಪನ್ನೀಲ್ ಸೆಲ್ವಂ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.
ರಾಜಭವನದ ಮೂಲಗಳು ತಿಳಿಸಿರುವ ಪ್ರಕಾರ, ವಿದ್ಯಾಸಾಗರ್ ಅವರು ಯಾವಾಗ ತಮಿಳುನಾಡಿಗೆ ಬರುತ್ತಾರೆಂಬ ದಿನಾಂಕ ಇನ್ನು ಖಚಿತವಾಗಿಲ್ಲ. ರಾಜ್ಯಪಾಲರು ಬಂದ ನಂತರವಷ್ಟೇ ಶಶಿಕಲಾ ಅವರ ಕುರಿತಂತೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ.
Advertisement