ಚೆನ್ನೈ: ತಮಿಳುನಾಡು ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ಕುದುರೆ ವ್ಯಾಪಾರದ ಭೀತಿಯಲ್ಲಿರುವ ಶಶಿಕಲಾ ಬಣ ತಮ್ಮ ಶಾಸಕರನ್ನು ಖಾಸಗಿ ರೆಸಾರ್ಟ್ ಗೆ ರವಾನಿಸಿದ್ದು, ಕಳೆದೆರಡು ದಿನಗಳಿಂದ ಶಾಸಕರು ನಾಪತ್ತೆಯಾಗಿದ್ದಾರೆ. ಹೀಗಾಗಿ ನಾಪತ್ತೆಯಾಗಿರುವ ಶಾಸಕರ ಕುರಿತಂತೆ ವರದಿ ನೀಡುವಂತೆ ಮದ್ರಾತ್ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಸುಮಾರು 120 ಶಾಸಕರು ಪ್ರಸ್ತುತ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು, ಕಳೆದೆರಡು ದಿನಗಳಿಂದ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಶಾಸಕರೊಬ್ಬರ ಪತ್ನಿಯೊಬ್ಬರು ತಮ್ಮ ಪತಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಅಲ್ಲದೆ ಖ್ಯಾತ ಆರ್ ಟಿಐ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಮತ್ತು ವಕೀಲ ಕೆ ಬಾಲು ಎಂಬುವವರು ಶಾಸಕರು ರೆಸಾರ್ಟ್ ಗೆ ತೆರಳಿರುವ ಕುರಿತು ಹೈ ಕೋರ್ಟ್ ಗೆ ಮಾಹಿತಿ ನೀಡಿದ್ದರು. ಅಲ್ಲದೆ ಶಾಸಕರ ಕುದುರೆ ವ್ಯಾಪಾರದ ಕುರಿತೂ ಹೈಕೋರ್ಟ್ ನ ಗಮನ ಸೆಳೆದಿದ್ದರು.
ಅಂತೆಯೇ ಶಶಿಕಲಾ ಅವರು ಶಾಸಕರನ್ನು ಬಲವಂತವಾಗಿ ಬಂಧನದಲ್ಲಿಟ್ಟುಕೊಂಡಿದ್ದಾರೆ ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ. ಶಾಸಕರಿಗೆ ಸುದ್ದಿ ಪತ್ರಿಕೆ, ಮೊಬೈಲ್ ಮತ್ತು ಇಂಟರ್ನೆಟ್ ಸೌಲಭ್ಯ ನೀಡದೆ ಕೂಡಿ ಹಾಕಲಾಗಿದೆ ಎಂದು ದೂರಲಾಗಿದೆ. ಪ್ರಸ್ತುತ ಕೋವಳಂ ಬಳಿ ಇರುವ ಖಾಸಗಿ ರೆಸಾರ್ಟ್ ನಲ್ಲಿ ಶಾಸಕರು ತಂಗಿದ್ದು, ಇದೀಗ ಅವರನ್ನು ಮತ್ತೊಂದು ರೆಸಾರ್ಟ್ ಗೆ ಬದಲಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಈ ಸಂಬಂಧ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನಾಪತ್ತೆಯಾಗಿರುವ ಶಾಸಕರ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಚೆನ್ನೈ ಪೊಲೀಸರಿಗೆ ಸೂಚನೆ ನೀಡಿದೆ.
ಶಶಿಕಲಾ ಸಭೆ ಬಳಿಕ ನಾಪತ್ತೆಯಾದ ಕುಣ್ಣಮ್ ಕ್ಷೇತ್ರದ ಶಾಸಕ
ಇನ್ನು ಬುಧವಾರ ಪೋಯಸ್ ಗಾರ್ಡನ್ ನಿವಾಸದಲ್ಲಿ ನಡೆದ ಶಶಿಕಲಾ ಅವರ ಶಾಸಕರ ಸಭೆ ಬಳಿಕ ಅರಿಯಲೂರ್ ಜಿಲ್ಲೆಯ ಕುಣ್ಣಮ್ ಕ್ಷೇತ್ರದ ಶಾಸಕ ಆರ್ ಟಿ ರಾಮಚಂದ್ರನ್ ನಾಪತ್ತೆಯಾಗಿದ್ದು, ಆತನ ಕುರಿತಂತೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ಶಶಿಕಲಾ ಬಣದ ಶಾಸಕರು ತಂಗಿರುವ ಖಾಸಗಿ ರೆಸಾರ್ಟ್ ನಲ್ಲಿಯೇ ಆರ್ ಟಿ ರಾಮಚಂದ್ರನ್ ಕೂಡ ತಂಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಸುದ್ದಿವಾಹನಗಳು ಬಿತ್ತರ ಮಾಡಿರುವ ರೆಸಾರ್ಟ್ ನ ವಿಡಿಯೋಗಳಲ್ಲಿ ಶಾಸಕರ ಕಾರುಗಳು ರೆಸಾರ್ಟ್ ಒಳಗಿರುವುದು ಸ್ಪಷ್ಟವಾಗಿದೆ.
Advertisement