ಚೆನ್ನೈ: ಅಕ್ರಮ ಆಸ್ತಿ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ, ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಈ ವೇಳೆ ಶಶಿಕಲಾ ಜಯಾ ಸಮಾಧಿಗೆ ಮೂರು ಬಾರಿ ಹೊಡೆದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.
ಇಂದು ಬೆಳಗ್ಗೆ ಶಶಿಕಲಾ ಪರ ವಕೀಲ ಕೆಟಿಎಸ್ ತುಳಸೀ ದಾಸ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಶರಣಾಗತಿಗೆ ಕಾಲಾವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದರಾದರೂ, ಸುಪ್ರೀಂ ಕೋರ್ಟ್ ಮಾತ್ರ ಯಾವುದೇ ರೀತಿಯ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಶಶಿಕಲಾ ಕೋರ್ಟ್ ಗೆ ಹಾಜರಾಗಿ ಶರಣಾಗುವುದು ಅನಿವಾರ್ಯವಾಗಿತ್ತು. ಇದೇ ಹಿನ್ನಲೆಯಲ್ಲಿ ಶಶಿಕಲಾ ಇಂದು ಬೆಂಗಳೂರಿನತ್ತ ಪಯಣ ಬೆಳೆಸಿದ್ದು, ಇದಕ್ಕೂ ಮೊದಲು ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಾ ಸಮಾಧಿ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಜಯಲಲಿತಾರನ್ನು ನೆನೆದ ಶಶಿಕಲಾ ಸಮಾಧಿಯಿಂದ ಹೊರಡುವ ಮುನ್ನ ಮನದಲ್ಲೇ ಏನ್ನನ್ನೋ ನೆನೆಯುತಾ ಮೂರು ಬಾರಿ ತಮ್ಮ ಕೈಯಿಂದ ಸಮಾಧಿಗೆ ತಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಶಿಕಲಾ ಜಯಾ ಸಮಾಧಿಗೆ ತಟ್ಟಿದ್ದು, ಅಸಹಾಯಕತೆಯಿಂದಲೋ ಅಥವಾ ಪ್ರತಿಜ್ಞೆ ಮಾಡಿ ತಟ್ಟಿದರೋ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ.
ಮತ್ತೆ ಬಂದೇ ಬರುತ್ತೇನೆ.. ಅಧಿಕಾರಕ್ಕೇರುತ್ತೇನೆ: ಶಶಿಕಲಾ ಶಪಥ
ಇನ್ನು ಸಮಾಧಿಗೆ ಶಶಿಕಲಾ ತಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ಆಪ್ತರು ಸ್ಪಷ್ಟನೇ ನೀಡಿದ್ದು, ಶಶಿಕಲಾ ಶಪಥ ಮಾಡುತ್ತಾ ಮೂರು ಬಾರಿ ಸಮಾಧಿಗೆ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ. ಶಶಿಕಲಾ ಸಮಾಧಿಗೆ ಭೇಟಿ ನೀಡುವ ವೇಳೆ ಜೊತೆಯಲ್ಲಿದ್ದ ಅವರ ಆಪ್ತರು ಹೇಳಿರುವಂತೆ ಶಶಿಕಲಾ ಪ್ರಸ್ತುತ ಜೈಲಿಗೆ ಹೋಗುತ್ತಿರಬಹುದು. ಆದರೆ ಮತ್ತೆ ರಾಜ್ಯಕ್ಕೆ ವಾಪಸ್ ಬಂದೇ ಬರುತ್ತೇನೆ.. ಬಂದ ಬಳಿಕ ಅಧಿಕಾರಕ್ಕೇರಿಯೇ ತೀರುತ್ತೇನೆ ಎಂದು ಶಪಥ ಮಾಡಿದರು ಎಂದು ಅವರು ಹೇಳಿದ್ದಾರೆ.
Advertisement