ಶ್ರೀನಗರ: ಹೊಸ ವರ್ಷಾಚರಣೆ ಬೆನ್ನಲ್ಲೇ ಪಾಕಿಸ್ತಾನ ಯೋಧರು ಮತ್ತೆ ಗಡಿಯಲ್ಲಿ ದಾಳಿ ಮುಂದುವರೆಸಿದ್ದು, ಪೂಂಚ್ ಸೆಕ್ಟರ್ ನಲ್ಲಿರುವ ಭಾರತೀಯ ಪೋಸ್ಚ್ ಗಳ ಮೇಲೆ ನಿರಂತರ ದಾಳಿ ಮಾಡುತ್ತಿದ್ದಾರೆ.
ಪೂಂಚ್ ಸೆಕ್ಟರ್ ಮೇಲೆ ಭಾನುವಾರ ಬೆಳಗ್ಗಿನಿಂದಲೂ ಪಾಕಿಸ್ತಾನ ಯೋಧರು ಶೆಲ್ ಗಳು ಮತ್ತು ಗುಂಡಿನ ಮೂಲಕ ದಾಳಿ ಮಾಡುತ್ತಿದ್ದು, ಪಾಕಿಸ್ತಾನಿ ಪಡೆಗಳಿಗೆ ಭಾರತೀಯ ಯೋಧರು ದಿಟ್ಟ ಉತ್ತರ ನೀಡುತ್ತಿದ್ದಾರೆ. ಇಂದು ಬೆಳಗ್ಗೆ ಮತ್ತೆ ಪಾಕ್ ಯೋಧರು ಗುಂಡಿನ ದಾಳಿ ಆರಂಭಿಸಿದ್ದರಿಂದ ಭಾರತೀಯ ಯೋಧರ ಮೂರು ತಂಡಗಳು ನಿರಂತರ ಗುಂಡಿನ ದಾಳಿಯಲ್ಲಿ ತೊಡಗಿವೆ.
ಪಾಕ್ ಯೋಧರ ಗುಂಡೇಟಿಗೆ ಸ್ಥಳೀಯ ಯುವಕ ಸಾವು, ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಂಡಿ ಎಂದ: ಸ್ಥಳೀಯ ಮಸೀದಿ
ಇನ್ನು ಶುಕ್ರವಾರ ಪಾಕಿಸ್ತಾನ ಪಡೆಗಳು ನಡೆಸಿದ್ದ ಗುಂಡಿನ ದಾಳಿ ವೇಳೆ ಸ್ಥಳೀಯ ಯುವಕನೋರ್ವ ಸಾವನ್ನಪ್ಪಿದ್ದ. ಶುಕ್ರವಾರದಿಂದ ಈ ವರೆಗೂ ಯುವಕನ ಅಂತ್ಯಸಂಸ್ಕಾರ ಸಾಧ್ಯವಾಗಿರಲಿಲ್ಲ. ಪಾಕಿಸ್ತಾನಿ ಪಡೆಗಳು ಸತತ ಗುಂಡಿನ ದಾಳಿ ನಡೆಸುತ್ತಿದ್ದರಿಂದ ಅಂತ್ಯ ಸಂಸ್ಕಾರ ಸಾಧ್ಯವಾಗಿರಲಿಲ್ಲ. ಹೀಗಾಗಿ ಪಾಕಿಸ್ತಾನ ಯೋಧರ ಪುಂಡಾಟದ ವಿರುದ್ಧ ಸ್ಥಳೀಯ ಮಸೀದಿ ಆಕ್ರೋಶಗೊಂಡಿದ್ದು, ಧ್ವನಿವರ್ಧಕಗಳ ಮೂಲಕ ಗುಂಡಿನ ದಾಳಿ ನಿಲ್ಲಿಸಿ ಎಂದು ಹೇಳಿದೆ. ನಿಮ್ಮ ಗುಂಡಿನ ದಾಳಿಯಿಂದಾಗಿ ಓರ್ವ ಅಮಾಯಕ ಯುವಕ ಸಾವನ್ನಪ್ಪಿದ್ದು, ಆತನ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಶಾಂತಿಯುತ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ಕೊಡಿ ಎಂದು ಕೇಳಿದೆ.
ಮಸೀದಿಯ ಮನವಿ ಮೇರೆಗೆ ಕೆಲ ಹೊತ್ತು ಗುಂಡಿನ ಚಕಮಕಿಯನ್ನು ನಿಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ. ಮೃತ ಯುವಕನನ್ನು 17 ವರ್ಷದ ತನ್ವೀರ್ ಎಂದು ಗುರುತಿಸಲಾಗಿದೆ.
Advertisement