ಖಂಡಾಂತರ ವ್ಯಾಪಾರ ಹಾಗೂ ಆರ್ಥಿಕ ಸಾಮರಸ್ಯಕ್ಕಾಗಿ ಆಯೋಜಿಸುವ 'ರೈಸಿನಾ ಡೈಲಾಗ್’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿರುವ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್, ಚೀನಾ ನಮ್ಮ ಏಳಿಗೆಯನ್ನು ಅಪಾಯ ಎಂಬಂತೆ ನೋಡಬಾರದು ಎಂದು ಕರೆ ನೀಡಿದ್ದಾರೆ. ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಬಗ್ಗೆಯೂ ಮಾತನಾಡಿರುವ ಜೈಶಂಕರ್, ಚೀನಾ ತನ್ನ ಪ್ರಾದೇಶಿಕ ಹಕ್ಕುಗಳ ಬಗ್ಗೆ ಬಹಳ ಸಂವೇದನೆಯಿಂದ ನಡೆದುಕೊಳ್ಳುತ್ತದೆ. ಬೇರೆ ರಾಷ್ಟ್ರಗಳ ಪ್ರಾದೇಶಿಕ ಹಕ್ಕುಗಳಿಗೂ ಅದೇ ಸಂವೇದನೆಯಿಂದ ಸ್ಪಂದಿಸಬೇಕೆಂಬ ಅಪೇಕ್ಷೆ ಇದೆ ಎಂದು ಹೇಳಿದ್ದಾರೆ.