ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ದಟ್ಟ ಹಿಮ ಬೀಳುವುದು ಮುಂದುವರಿದಿದ್ದು ಚಳಿಗೆ ಜನರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರ ಸಂಚಾರ ಸಮಸ್ಯೆಗಳು ಮಾತ್ರವಲ್ಲದೆ ನೀರು, ವಿದ್ಯುತ್ ಪೂರೈಕೆಯಂತಹ ತೊಂದರೆಗಳು ಕೂಡ ಕಂಡುಬರುತ್ತಿವೆ.
ಪಟ್ನಿಟೊಪ್ ನಲ್ಲಿ ನೀರು ಮಂಜುಗಡ್ಡೆಯಾಗಿರುವುದರಿಂದ ಜನರಿಗೆ ನಿತ್ಯ ಕಾರ್ಯಕ್ಕೆ ಸಿಗುವುದು ದುಸ್ತರವಾಗುತ್ತಿದೆ. ವಿದ್ಯುತ್ ಕೂಡ ಸರಿಯಾಗಿ ಪೂರೈಕೆಯಾಗುತ್ತಿಲ್ಲ.
ಹೊಟೇಲ್ ಗಳಲ್ಲಿ ನೀರು, ವಿದ್ಯುತ್ ಇಲ್ಲದೆ ಸರಿಯಾಗಿ ತಿಂಡಿ ತಿನಿಸುಗಳನ್ನು ತಯಾರಿಸಲು ಆಗುತ್ತಿಲ್ಲ ಎಂದು ಹೊಟೇಲ್ ನ ವ್ಯವಸ್ಥಾಪಕರೊಬ್ಬರು ಹೇಳುತ್ತಾರೆ.
ಜಮ್ಮು-ಕಾಶ್ಮೀರಕ್ಕೆ ತೆರಳಿರುವ ಪ್ರವಾಸಿಗರು ಅಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದಾರೆ. ''ನಮಗೆ ಆದಷ್ಟು ಬೇಗ ಮನೆಗೆ ಹೋಗಬೇಕೆಂದು ಅನಿಸುತ್ತಿದೆ. ಇಲ್ಲಿ ಮೂಲಭೂತ ಅಗತ್ಯಗಳಿಗೆ ತೊಂದರೆಯಾಗುತ್ತಿದೆ''ಎನ್ನುತ್ತಾರೆ ಪ್ರವಾಸಿಗರೊಬ್ಬರು.
ದಟ್ಟ ಮಂಜು ಕವಿದಿರುವುದರಿಂದ ಜಮ್ಮುವಿನ ಮುಘಲ್ ರಸ್ತೆಯಲ್ಲಿ ವಾಹನ ಸಂಚಾರದ ಮೇಲೆ ಪರಿಣಾಮ ಬಿದ್ದಿದೆ.ಪ್ರತಿ ವರ್ಷ ಚಳಿಗಾಲದಲ್ಲಿ ಕಣಿವೆ ರಾಜ್ಯದಲ್ಲಿ ಈ ಸಮಸ್ಯೆ ಕಂಡುಬರುವುದರಿಂದ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಸಲಹೆಯೊಂದನ್ನು ಹೇಳಿದ್ದಾರೆ.
ಸುರಂಗವೊಂದನ್ನು ಕೆತ್ತಿ ಸಂಚಾರಕ್ಕೆ ತೊಂದರೆಯುಂಟಾಗಿರುವ ರಾಜೌರಿ, ಪೂಂಚ್ ಜಿಲ್ಲೆಗಳನ್ನು ಕಾಶ್ಮೀರಕ್ಕೆ ಸಂಪರ್ಕಿಸಬೇಕು ಎನ್ನುತ್ತಾರೆ.