ಪಣಜಿ: ಗೋವಾದ ಸದಾ ಸಬ್ ಜೈಲಿನಲ್ಲಿ ಸಿನಿಮೀಯ ರೀತಿಯ ಘಟನೆಯೊಂದು ನಡೆದಿದೆ. ಅಧಿಕಾರಿಗಳು ಹಾಗೂ ಇತರ ಕೈದಿಗಳನ್ನು ಒತ್ತೆಯಾಳಾಗಿರಿಸಿಕೊಂಡು ಜೈಲಿನಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ ಕೈದಿಗಳ ಯತ್ನ ವಿಫಲವಾಗಿದ್ದು, ಘಟನೆಯಲ್ಲಿ ಓರ್ವ ಕೈದಿ ಮೃತಪಟ್ಟು ಜೈಲರ್ ಸೇರಿದಂತೆ 13 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ವಿನಾಯಕ್ ಕೊರ್ಬಾತ್ಕರ್ ಘಟನೆಯಲ್ಲಿ ಹತ್ಯೆಯಾದ ಕೈದಿಯಾಗಿದ್ದಾನೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಕೊಲೆ ಪ್ರಕರಣ ಸಂಬಂಧ ಈತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಸ್ಥಳೀಯ ಜೈಲಿನಿಂದ ಗೋವಾದ ವಾಸ್ಕೋ ಟೌನ್ ನಲ್ಲಿರುವ ಸದಾ ಸಬ್ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.
ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ 49 ಕೈದಿಗಳು ಜೈಲಿನಿಂದ ಪರಾರಿಯಾಗವ ಸಲುವಾಗಿ ಇಡೀ ಜೈಲನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯತ್ನ ನಡೆಸಿದ್ದಾರೆ. ಇದರಂತೆ ಇತರ ಕೈದಿಗಳು, ಜೈಲರ್ ಹಾಗೂ ಅಧಿಕಾರಿಗಳನ್ನು ಒತ್ತೆಯಾಳಾಗಿರಿಸಿಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ, ಅಲ್ಲದೆ, ಜೈಲಿನಲ್ಲಿದ್ದ ವಸ್ತುಗಳನ್ನು ಮನಬಂದಂತೆ ಹೊಡೆದುಹಾಕಿದ್ದಾರೆ. ಈ ವೇಳೆ ಜೈಲಿನಲ್ಲಿ ಉಂಟಾದ ಘರ್ಷಣೆಯಲ್ಲಿ ವಿನಾಯಕ್ ಕೋರ್ಬಾತ್ಕರ್ ಎಂಬ ಕೈದಿಯನ್ನು ಹತ್ಯೆ ಮಾಡಲಾಗಿದೆ.
ಕೈದಿಗಳು ಜೈಲಿನ ಭದ್ರತಾ ವ್ಯವಸ್ಥೆಯನ್ನು ದಾಟಿ ಮುಖ್ಯ ದ್ವಾರದ ಬಳಿ ಬಂದಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸರು ಕೈದಿಗಳನ್ನು ತಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಘಟನೆಯಲ್ಲಿ ಜೈಲರ್ ವಿಟ್ಠಲ್ ಗವಾಸ್, ಇಬ್ಬರು ಭದ್ರತಾ ಸಿಬ್ಬಂದಿಗಳು ಸೇರಿದಂತೆ 9 ಮಂದಿ ಕೈದಿಗಳು ಗಾಯಗೊಂಡಿದ್ದಾರೆ. ಘಟನೆಯಿಂದಾಗಿ ಜೈಲಿನಗೆ ಅಪಾರ ಪ್ರಮಾಣದ ಹಾನಿಯುಂಟಾಗಿರುವುದರಿಂದ ಕೈದಿಗಳನ್ನು ಬೇರೆ ಜೈಲಿಗಳಿಗೆ ಸ್ಥಲಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement