ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಕೈಗೊಳ್ಳಲು ಪಾಕಿಸ್ತಾನ ಸೇನೆಯು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರಿಗೆ ರಾಸಾಯನಿಕ ಅಸ್ತ್ರಗಳನ್ನು ನೀಡಿದೆ ಎಂಬ ಆಘಾತಕಾರಿ ಮಾಹಿತಿಯೊಂದು...
ನವದೆಹಲಿ: ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಕೈಗೊಳ್ಳಲು ಪಾಕಿಸ್ತಾನ ಸೇನೆಯು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರಿಗೆ ರಾಸಾಯನಿಕ ಅಸ್ತ್ರಗಳನ್ನು ನೀಡಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಇದೀಗ ಬೆಳಕಿಗೆ ಬಂದಿದೆ.
ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರ ನಡುವಿನ ದೂರವಾಣಿ ಸಂಭಾಷಣೆಯನ್ನು ಭದ್ರತಾ ಸಂಸ್ಥೆಗಳು ಕದ್ದಾಲಿಸಿದ್ದು, ಈ ವೇಳೆ ಈ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ.
ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ 90 ಉಗ್ರರು ಸಾವನ್ನಪ್ಪಿದ್ದು, ಹಿಜ್ಬುಲ್ ಸಂಘಟನೆಯ ಬುಡವನ್ನೇ ಅಲ್ಲಾಡಿಸಿದೆ. ಈ ಹಿನ್ನಲೆಯಲ್ಲಿ ರಾಸಾಯನಿಕ ಅಸ್ತ್ರಗಳೊಂದಿಗೆ ಪುನಃ ನೆಲೆಯನ್ನು ಗಟ್ಟಿ ಮಾಡಿಕೊಳ್ಳಲು ಹಿಜ್ಬುಲ್ ಸಂಚು ರೂಪಿಸಿದೆ ಎಂದು ಖಾಸಗಿ ಮಾಧ್ಯಮವೊಂದು ತನ್ನ ವರದಿಯಲ್ಲಿ ಹೇಳಿದೆ.
ಹಿಜ್ಬುಲ್ ಉಗ್ರರಿಗೆ ಈಗಾಗಲೇ ಪಾಕಿಸ್ತಾನ ಸೇನೆ ರಾಸಾಯನಿಕ ಅಸ್ತ್ರಗಳು ಒದಗಿಸಿದ್ದು, ಇವುಗಳ ಬಳಕೆಗೆ ಸೂಕ್ತ ಸಂದರ್ಭಕ್ಕಾಗಿ ಉಗ್ರರು ಕಾಯುತ್ತಿದ್ದಾರೆನ್ನಲಾಗಿದೆ.
ಇದಕ್ಕೆ ಸಾಕ್ಷ್ಯವೆಂಬಂತೆ ಒಂದು ದೂರವಾಣಿ ಸಂಭಾಷಣೆಯಲ್ಲಿ ಉಗ್ರರು ಲಷ್ಕರ್-ಇ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಬಗ್ಗೆ ಉಲ್ಲೇಖಿಸುತ್ತಾರೆ.
ಪೀರ್ ಸಾಹೇಬರು (ಹಫೀಜ್ ಸಯೀದ್) ನನಗೆ ಬುಲಾವ್ ನೀಡಿದ್ದಾರೆ. ನಮ್ಮ ಮುಂದಿನ ಕಾರ್ಯಕ್ರಮ ಈದ್ ನಂತರ. ಈದ್ ನಂತರ ಮುಂದಿನ ಯೋಜನೆ ರೂಪಿಸೋಣ ಎಂದು ಒಬ್ಬ ಉಗ್ರ ಇನ್ನೊಬ್ಬನಿಗೆ ಹೇಳುತ್ತಾನೆ.
ಇದಕ್ಕೆ ಪ್ರತಿಕ್ರಿಯೆ ನೀಡುವ ಮತ್ತೊಬ್ಬ ಉಗ್ರ ಈವರೆಗೆ ನಾವು ಕೇವಲ ಬಂದೂಕು, ಗ್ರೆನೇಡ್ ಬಳಸುತ್ತಿದ್ದೆವು. ಇವನ್ನು ಬಳಸಿದರೆ, 3-4 ಜನರನ್ನು ಮಾತ್ರ ಸಾಯಿಸಬಹುದಿತ್ತು. ಆದರೆ, ಈಗ ರಾಸಾಯನಿಕ ಅಸ್ತ್ರ ಬಳಸಿ ಭಾರತೀಯ ಪಡೆಗಳನ್ನು ಚಕಿತಗೊಳಿಸೋಣ. ಇದರಿಂದ ಹೆಚ್ಚು ಜನರನ್ನು ಸಾಯಿಬಹುದು ಎಂದಿದ್ದಾನೆ.
ನಂತರ ಮಾತನಾಡಿರುವ ಮತ್ತೊಬ್ಬ ಉಗ್ರ ಪಾಕಿಸ್ತಾನದಿಂದ ನಮಗೆ ಭಾರಿ ಬೆಂಬಲ ಸಿಗುತ್ತಿದೆ. ಈಗಾಗಲೇ ಗಡಿಯಲ್ಲಿ ಇದರ ಪರಿಣಾಮ ಗೋಚರವಾಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ವಿರೋಧಿ ಅಭಿಯಾನ ತೀವ್ರಗೊಳಿಸೋಣ ಎಂದಿದ್ದಾನೆ.
ರಾಸಾಯನಿಕ ದಾಳಿ ನಡೆಸಲು ಉಗ್ರರು ಸಂಚು ರೂಪಿಸುತ್ತಿರು ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.