ಮುಂಬೈ: ಖ್ಯಾತ ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ಕರ್ ಅವರಿಗೆ ಸೂಕ್ತ ಭದ್ರತೆ ಒದಗಿಸುವುದಾಗಿ ಸೋಮವಾರ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.
ಮಧುರ್ ಭಂಡಾರ್ಕರ್ ಅವರ ಹೊಸ ಚಿತ್ರ 'ಇಂದು ಸರ್ಕಾರ್'ಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕರಿಗೆ ಭದ್ರತೆ ನೀಡುವುದಾಗಿ ಮಹಾ ಸರ್ಕಾರ ತಿಳಿಸಿದೆ.
'ಇಂದು ಸರ್ಕಾರ್' ಚಿತ್ರದ ಬಗ್ಗೆ ಇಂದು ನಾಗ್ಪುರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಗೆ ಮಧುರ್ ಭಂಡಾರ್ಕರ್ ಆಗಮಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ತಡೆದಿದ್ದರಿಂದ ಪತ್ರಿಕಾಗೋಷ್ಠಿ ರದ್ದಾಗಿದ್ದು, ನಿರ್ದೇಶಕರಿಗೆ ಸೂಕ್ತ ಭದ್ರತೆ ನೀಡಲಾಗಿದೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವಧಿಯಲ್ಲಿ ಜಾರಿಯಾಗಿದ್ದ ತುರ್ತು ಪರಿಸ್ಥಿತಿಯ ಕುರಿತಾಗಿ ಹಾಗೂ ಇಂದಿರಾಗಾಂಧಿ ಆಡಳಿತದ ಕುರಿತಾಗಿ ಇಂದು ಸರ್ಕಾರ್ ಚಿತ್ರ ನಿರ್ಮಿಸಲಾಗಿದ್ದು, ಇಂದಿರಾಗಾಂಧಿ, ಸಂಜಯ್ ಗಾಂಧಿ ಪ್ರೇರಿತ ಪಾತ್ರಗಳು ಇವೆ.