ಭಾರತದಲ್ಲಿರುವ ಮುಸ್ಲಿಮರ ಮೇಲೆ ದೌರ್ಜನ್ಯವೆಸಗಿದರೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ: ಉಗ್ರ ಝಾಕೀರ್

ಭಾರತದಲ್ಲಿರುವ ಮುಸ್ಲಿಮರ ಮೇಲೆ ದೌರ್ಜನ್ಯವೆಸಗಿದ್ದೇ ಆದರೆ, ಷರಿಯಾ ಹೇರಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆಂದು ಉಗ್ರ ಝಾಕೀರ್ ಮೂಸಾ ಬೆದರಿಕೆ ಹಾಕಿದ್ದಾನೆ...
ಉಗ್ರ ಝಾಕೀರ್ ಮೂಸಾ
ಉಗ್ರ ಝಾಕೀರ್ ಮೂಸಾ

ನವದೆಹಲಿ: ಭಾರತದಲ್ಲಿರುವ ಮುಸ್ಲಿಮರ ಮೇಲೆ ದೌರ್ಜನ್ಯವೆಸಗಿದ್ದೇ ಆದರೆ, ಷರಿಯಾ ಹೇರಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆಂದು ಉಗ್ರ ಝಾಕೀರ್ ಮೂಸಾ ಬೆದರಿಕೆ ಹಾಕಿದ್ದಾನೆ. 

ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಝಾಕೀರ್ ಮುಸಾ ಆಡಿಯೋ ಟೇಪ್ ಗಳನ್ನು ಬಿಡುಗಡೆ ಮಾಡಿದ್ದಾನೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮೊದಲು ಬಿಡುಗಡೆಯಾಗಿರುವ ಆಡಿಯೋ ಟೇಪ್ ನಲ್ಲಿ ಇಸ್ಲಾಮಿಕ್ ಜಿಹಾದ್ ಜೊತೆಗೆ ಕೈಜೋಡಿಸದ ಭಾರತೀಯ ಮುಸ್ಲಿಮರ ವಿರುದ್ಧ ಝಾಕೀರ್ ಕಿಡಿ ಕಾರಿದ್ದಾನೆ. 

ಭಾರತವನ್ನು ವಶಕ್ಕೆ ಪಡೆದುಕೊಳ್ಳಲು ಘಾಜ್ವಾ-ಇ-ಹಿಂದ್ ಅಂತಿಮ ಹೋರಾಟವಾಗಿದ್ದು, ಭಾರತೀಯ ಮುಸ್ಲಿಮರು ಈ ಹೋರಾಟದಲ್ಲಿ ಕೈ ಜೋಡಿಸಬೇಕೆಂದು ಮುಸಾ ಹೇಳಿಕೊಂಡಿದ್ದಾನೆ. ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ನಮ್ಮ ಯುದ್ಧ ಕೇವಲ ಕಾಶ್ಮೀರಕ್ಕೆ ಮಾತ್ರವೇ ಸೀಮಿತವಾಗಿಲ್ಲ. ನಮ್ಮ ಯುದ್ಧ ಇಸ್ಲಾಂ ಹಾಗೂ ನಾಸ್ತಿಕರ ವಿರುದ್ಧವಾಗಿದೆ. ಭಾರತೀಯ ಮುಸ್ಲಿಮರು ಜಿಹಾದ್ ಕುರಿತ ಹೋರಾಟದಲ್ಲಿ ಕೈಜೋಡಿಸದಿರುವುದಕ್ಕೆ ನಾಚಿಕೆಯಾಗಬೇಕು. 

ವಿಶ್ವದಲ್ಲಿಯೇ ಭಾರತದಲ್ಲಿರುವ ಮುಸ್ಲಿಮರು ನಾಚಿಕೆಗೇಡಿತನದ ಮುಸ್ಲಿಮರಾಗಿದ್ದಾರೆ. ಮುಸ್ಲಿಮರೆಂದು ಹೇಳಿಕೊಳ್ಳುವುದಕ್ಕೆ ಅವರಿಗೆ ನಾಚಿಕೆಯಾಗಬೇಕು. ನಮ್ಮ ಸಹೋದರಿಯರು ನಿಂದನೆಗೊಳಗಾಗುತ್ತಿದ್ದಾರೆ. ಅಗೌರವಕ್ಕೊಳಗಾಗುತ್ತಿದ್ದಾರೆ. ಇಸ್ಲಾಂ ಎಂದರೆ ಶಾಂತಿಯೆಂದು ಭಾರತೀಯ ಮುಸ್ಲಿಮರು ಕೂಗುತ್ತಿದ್ದಾರೆ. ಈಗಲೂ ನಿಮಗೆ ಅವಕಾಶವಿದೆ. 

ಈಗಾಗಲೇ ಸಮಯ ಕಳೆದು ಹೋಗಿದೆ. ಈಗಲಾದರೂ ನಮ್ಮೊಂದಿಗೆ ಕೈಜೋಡಿಸಿ. ಮುಂದೆ ಬನ್ನಿ. ಮುಸ್ಲಿಂ ಸಮುದಾಯ ಮತ್ತು ಇಸ್ಲಾಂ ಎಷ್ಟು ಗೋರಕ್ಷಕರಿಗಿಂತ ಎಷ್ಟು ಶಕ್ತಿಶಾಲಿಯಾಗಿದೆ ಎಂಬುದನ್ನು ತೋರಿಸಿ. ಭಾರತದಲ್ಲಿ ಪ್ರತೀಯೊಬ್ಬ ಮುಸ್ಲಿಮನ ವಿರುದ್ಧ ನಡೆಸಲಾದ ದೌರ್ಜನ್ಯದ ವಿರುದ್ದ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವನೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವದಲ್ಲಿಯೇ ಷರಿಯಾ ಹೇರುತ್ತೇವೆಂದು ಝಾಕೀರ್ ಮುಸಾ ಎಚ್ಚರಿಸಿದ್ದಾನೆ. 

ಇನ್ನು ಆಡಿಯೋ ಟೇಪ್ ನ್ನು ಪರಿಶೀಲನೆ ನಡೆಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಧ್ವನಿ ಝಾಕೀರ್ ಮುಸಾನದ್ದೇ ಎಂದು ಖಚಿತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com