ನವದೆಹಲಿ: ದೇಶದಾದ್ಯಂತ ಈದ್-ಉಲ್-ಫಿತರ್ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಮುಸ್ಲಿಂ ಬಾಂಧವರಿಗೆ ಸೋಮವಾರ ಶುಭಾಶಯಗಳನ್ನು ಕೋರಿದ್ದಾರೆ.
ವೈವಿಧ್ಯತೆ ಭಾರತದ ವಿಶೇಷ, ಇಂದು ದೇಶದಾದ್ಯಂತ ಈದ್ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ದೇಶದ ಎಲ್ಲಾ ಮುಸ್ಲಿಂ ಸಹೋದರರು, ಸಹೋದರಿಯರು, ಭಾರತೀಯರು ಹಾಗೂ ವಿದೇಶದಲ್ಲಿರುವವರಿಗೆಲ್ಲರಿಗೂ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ.
ರಂಜಾನ್ ಅತ್ಯಂತ ಪವಿತ್ರತೆಯುಳ್ಳ ತಿಂಗಳಾಗಿದ್ದು, ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ಇದೀಗ ಈದ್ ಆಚರಣೆಯ ಸಮಯ. ಈದ್-ಉಲ್-ಫಿತರ್ ಆಚರಣೆ ಹಿನ್ನಲೆಯಲ್ಲಿ ದೇಶದ ಪ್ರತೀಯೊಬ್ಬ ನಾಗರಿಕನಿಗೂ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಇದರಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಕೂಡ ಮುಸ್ಲಿಂ ಬಾಂಧವರಿಗೆ ಈದ್-ಉಲ್-ಫಿತರ್ ಶುಭಾಶಯಗಳನ್ನು ಕೋರಿದ್ದಾರೆ.
ಈದ್ ಆಚರಣೆ ವಿಶ್ವಕ್ಕೆ ಸಂತೋಷ ಮತ್ತು ಶಾಂತಿಯ ಸಂದೇಶವನ್ನು ಈ ವಿಶೇಷ ದಿನದಂದು ಸಾರುತ್ತದೆ. ಪರಸ್ಪರ ಸೋದರತ್ವದ ಶಕ್ತಿ, ಸಾಮಾಜಿಕ ಏಕತೆಯನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.