ತಿರುವನಂತಪುರಂ: ಬುಡಕಟ್ಟು ಜನರ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ಪ್ರತಿಭಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕನೊಬ್ಬ ಗನ್ ತೋರಿಸಿ ದಾರಿ ಬಿಡಲಿಲ್ಲವೆಂದರೆ ಶೂಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳ ಜನ ಪಕ್ಷಂ ಪಾರ್ಟಿಯ ಸಂಸ್ಥಾಪಕ ನಾಯಕ ಪಿ.ಸಿ. ಜಾರ್ಜ್ ಅವರು ಮುಂಡಕ್ಕಯಂ ಬಳಿ ಎಸ್ಟೇಟ್ವೊಂದಕ್ಕೆ ಭೇಟಿ ನೀಡಲು ಆಗಮಿಸಿದ್ದಾಗ ಸ್ಥಳೀಯ ಪ್ರತಿಭಟನಾಕಾರರು ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. ಅಲ್ಲದೆ ಅವರ ಕಾರಿಗೆ ಮುತ್ತಿಗೆ ಹಾಕಿದ್ದು, ಇದರಿಂದ ಕುಪಿತಗೊಂಡ ಶಾಸಕ ಪಿ.ಸಿ. ಜಾರ್ಜ್ ಪ್ರತಿಭಟನಾಕಾರರನ್ನು ಚದುರಿಸುವುದಕ್ಕಾಗಿ ತಮ್ಮ ಜೇಬಿನಲ್ಲಿದ್ದ ರಿವಾಲ್ವರ್ ತೆಗೆದು ದಾರಿ ಬಿಡದಿದ್ದರೆ ಎಲ್ಲರನ್ನೂ ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಸಕನ ಕಾರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಮೂಲಗಳ ಪ್ರಕಾರ ಮುಂಡಕ್ಕಯಂ ಎಸ್ಟೇಟ್ ಬಳಿ ವಾಸಿಸುತ್ತಿರುವ 52 ಬಡ ಕುಟುಂಬಗಳನ್ನು ಭೇಟಿ ಮಾಡುವುದಕ್ಕಾಗಿ ಪೂಂಜಾರ್ ಚುನಾವಣಾ ಕ್ಷೇತ್ರದ ಶಾಸಕ ಜಾರ್ಜ್ ಬಂದಿದ್ದರು. ಎಸ್ಟೇಟ್ ಬಳಿ ವಾಸಿಸುತ್ತಿರುವ ಬಡವರ ಕುಟುಂಬಗಳಿಗೆ ಕೆಲವು ಪುಂಡರು ತೊಂದರೆ ಕೊಡುತ್ತಿರುವುದಾಗಿ ಅಲ್ಲಿನ ನಿವಾಸಿಗಳು ದೂರಿದ್ದರು. ಎಸ್ಟೇಟ್ ಬಳಿ ವಾಸಿಸುತ್ತಿರುವ ನಮ್ಮನ್ನು ಅಲ್ಲಿಂದ ಒಕ್ಕಲೆಬ್ಬಿಸಲು ರಾತ್ರಿ ಹೊತ್ತು ತೊಂದರೆ ನೀಡಲಾಗುತ್ತಿದೆ ಎಂದು ಅಲ್ಲಿ ವಾಸಿಸುತ್ತಿರುವ ಕುಟುಂಬಗಳು ಅಳಲು ತೋಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಜಾರ್ಜ್ ಆ ಪ್ರದೇಶಕ್ಕೆ ಭೇಟಿ ನೀಡಿದ್ದರು.
ಆದರೆ ಜಾರ್ಜ್ ಅವರು ಅಲ್ಲಿಗೆ ಕಾಲಿಡುತ್ತಿದ್ದಂತೆ ಕೆಲವು ಪ್ರತಿಭಟನಾಕಾರರು ಜಾರ್ಜ್ ಅವರ ವಿರುದ್ಧ ಘೋಷಣೆ ಕೂಗಿ ಸುತ್ತುವರಿದಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸುವುದಕ್ಕಾಗಿ ಜಾರ್ಜ್ ಗನ್ ತೋರಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಜಾರ್ಜ್, ನಾನು ಗನ್ ಹೊರ ತೆಗೆಯುವಂತೆ ಮಾಡಿದ್ದೇ ಆ ಪುಂಡರು. ನನ್ನ ಕೈಯಲ್ಲಿರುವುದು ಪರವಾನಗಿ ಇರುವ ಗನ್. ನನ್ನಲ್ಲಿಯೂ ಗನ್ ಇದೆ ಎಂದು ತೋರಿಸುವುದಕ್ಕಾಗಿಯೇ ಚೆಕ್ ಪಿಸ್ತೂಲ್ ಹೊರತೆಗೆದೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
Advertisement