ಚೆನ್ನೈ: ಕೇಂದ್ರ ಸಚಿವ ಪೊಣ್ ರಾಧಾಕೃಷ್ಣನ್ ಅವರ ಮೇಲೆ ಗುರುವಾರ ದುಷ್ಕರ್ಮಿಗಳು ಚಪ್ಪಲಿ ಎಸೆದಿರುವ ಘಟನೆ ವರದಿಯಾಗಿದೆ.
ಇತ್ತೀಚೆಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಜೆಎನ್ ಯು ವಿದ್ಯಾರ್ಥಿ ರಾಧಾಕೃಷ್ಣನ್ ಅವರ ಅಂತ್ಯ ಸಂಸ್ಕಾರ ತಮಿಳುನಾಡಿನ ಸೇಲಂ ನಲ್ಲಿ ನಡೆಯುತ್ತಿದ್ದು, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಪೊಣ್ ರಾಧಾಕೃಷ್ಣನ್ ಅವರ ಮೇಲೆ ದುಷ್ಕರ್ಮಿಗಳು ಚಪ್ಪಲಿ ಎಸೆದಿದ್ದಾರೆ. ಕೂಡಲೇ ಅವರನ್ನು ಸುತ್ತುವರೆದ ಪೊಲೀಸರು ಅವರನ್ನು ಬಿಗಿ ಭದ್ರತೆ ನಡುವೆ ಹೊರಗೆ ಕರೆದೊಯ್ದರು. ಚಪ್ಪಲಿ ಎಸೆದಿದ್ದು ಯಾರು ಮತ್ತು ಏತಕ್ಕೆ ಎಂಬ ವಿಚಾರವನ್ನು ಪೊಲೀಸರು ತನಿಖೆಗೊಳಪಡಿಸಿದ್ದಾರೆ.
ಇದೇ ಸೋಮವಾರ ದೆಹಲಿಯ ಮುನ್ರಿಕ್ ನಲ್ಲಿ ತಮ್ಮ ಕೊಠಡಿಯಲ್ಲಿ ವಿದ್ಯಾರ್ಥಿ ಮುತ್ತು ಕೃಷ್ಣನ್ ಅವರ ಮೃತ ದೇಹ ಪತ್ತೆಯಾಗಿತ್ತು. ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮುತ್ತು ಕೃಷ್ಣನ್ ಶವ ಪತ್ತೆಯಾಗಿತ್ತು, ಮುತ್ತು ಕೃಷ್ಣನ್ ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಆಪ್ತ ಸ್ನೇಹಿತರಾಗಿದ್ದು, ರೋಹಿತ್ ಸಾವಿನ ಪ್ರಕರಣ ಸಂಬಂಧ ನಡೆದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಹೀಗಾಗಿ ಅವರ ಸಾವಿನ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿ ಹಲವು ವಿದ್ಯಾರ್ಥಿಗಳು ಸಿಬಿಐ ತನಿಖೆಗೆ ಆಗ್ರಹಸಿದ್ದರು.
Advertisement