ನಾರದ ಸ್ಟಿಂಗ್ ಆಪರೇಷನ್: ಸಿಬಿಐ ತನಿಖಾ ಅವಧಿ ವಿಸ್ತರಿಸಿ, ಮಮತಾ ಅರ್ಜಿ ತಿರಸ್ಕರಿಸಿದ ಸುಪ್ರೀಂ

ನಾರದ ಕುಟುಕು ಕಾರ್ಯಾಚರಣೆ ಪ್ರಕರಣ ಸಂಬಂಧ ಸಿಬಿಐ ತನಿಖಾ ಅವಧಿಯನ್ನು ವಿಸ್ತರಿಸಿರುವ ಸುಪ್ರೀಂಕೋರ್ಟ್ ಮಮತಾ ಸರ್ಕಾರದ ಅರ್ಜಿಯನ್ನು ಮಂಗಳವಾರ ತಿರಸ್ಕರಿಸಿದೆ...
ಕೋಲ್ಕತಾ: ನಾರದ ಕುಟುಕು ಕಾರ್ಯಾಚರಣೆ ಪ್ರಕರಣ ಸಂಬಂಧ ಸಿಬಿಐ ತನಿಖಾ ಅವಧಿಯನ್ನು ವಿಸ್ತರಿಸಿರುವ ಸುಪ್ರೀಂಕೋರ್ಟ್ ಮಮತಾ ಸರ್ಕಾರದ ಅರ್ಜಿಯನ್ನು ಮಂಗಳವಾರ ತಿರಸ್ಕರಿಸಿದೆ. 
ತೃಣಮೂಲಕ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಲಂಚವನ್ನು ಸ್ವೀಕರಿಸಿರುವುದನ್ನು ಬಯಲಿಗೆಳೆದಿದೆ ಎನ್ನಲಾದ ನಾರದ ಕುಟುಕು ಕಾರ್ಯಾಚರಣೆ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ನೇತೃತ್ವದ ತ್ರಿಸದಸ್ಯ ಪೀಠ, ಪ್ರಕರಣ ತನಿಖೆಯ ಕಾಲಾವಕಾಶವನ್ನು 1 ತಿಂಗಳಿಗೆ ವಿಸ್ತರಿಸಿದೆ. ಅಲ್ಲದೆ, ಮಮತಾ ಬ್ಯಾನರ್ಜಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. 
ಕೆಲ ದಿನಗಳ ಹಿಂದಷ್ಟೇ ನಾರದ ಕುಟು ಕಾರ್ಯಾಚರಣೆ ಪ್ರಕರಣ ಸಂಬಂಧ ಆದೇಶ ಹೊರಡಿಸಿದ್ದ ಕೋಲ್ಕತಾ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿತ್ತು. 24 ಗಂಟೆಗಳೊಳಗಾಗಿ ಪ್ರಕರಣ ವಿವರಗಳನ್ನು ಕಲೆಹಾಕುವಂತೆ ಹಾಗೂ ಪ್ರಾಥಮಿಕತನಿಖೆಯನ್ನು ಆರಂಭಿಸುವಂತೆ ಸಿಬಿಐ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. 
ಕೋಲ್ಕತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಕೋರ್ಟ ಮೊರೆ ಹೋಗಿತ್ತು. ಸಿಬಿಐ ತನಿಖೆಯನ್ನು ರದ್ದು ಮಾಡಿ, ಮಾರ್ಚ್ 17 ರಂದು ಕೋಲ್ಕತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ತಡೆಹಿಡಿಯಬೇಕೆಂದು ಮನವಿ ಸಲ್ಲಿಸಿತ್ತು. 
ಇಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯದ ಬಳಿ ಮಮತಾ ಬ್ಯಾನರ್ಜಿ ಸರ್ಕಾರ ಬೇಷರತ್ ಕ್ಷಮೆಯಾಚಿಸಿದೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲ ಕೋಲ್ಕತಾ ನ್ಯಾಯಾಲಯದ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದರು. ನಾರದ ಕುಟುಕು ಕಾರ್ಯಾಚರಣೆ ಪ್ರಕರಣದ ಆದೇಶದಲ್ಲಿ ನ್ಯಾಯಾಲಯ ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ವಕೀಲ ಸುಪ್ರೀಂಕೋರ್ಟ್ ಬಳಿ ಕ್ಷಮೆಯಾಚಿಸಿದ್ದಾರೆಂದು ತಿಳಿದುಬಂದಿದೆ. 
2016ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಲ ರಾಜಕೀಯ ನಾಯಕರು ಹಣ ಪಡೆಯುತ್ತಿದ್ದ ದೃಶ್ಯಾವಳಿಗಳು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com