ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್

ಸೌದಿ ಕಂಪನಿಯಲ್ಲಿ 29 ಭಾರತೀಯರ ಸೆರೆ: ರಕ್ಷಣೆಗೆ ಧಾವಿಸಿದ ಸುಷ್ಮಾ ಸ್ವರಾಜ್

ಸೌದಿ ಕಂಪನಿಯೊಂದರಲ್ಲಿ ಸೆರೆಯಾಗಿರುವ ತೆಲಂಗಾಣ ಮೂಲದ 29 ಭಾರತೀಯರನ್ನು ರಕ್ಷಣೆ ಮಾಡಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಮುಂದಾಗಿದ್ದಾರೆ...
ನವದೆಹಲಿ: ಸೌದಿ ಕಂಪನಿಯೊಂದರಲ್ಲಿ ಸೆರೆಯಾಗಿರುವ ತೆಲಂಗಾಣ ಮೂಲದ 29 ಭಾರತೀಯರನ್ನು ರಕ್ಷಣೆ ಮಾಡಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಮುಂದಾಗಿದ್ದಾರೆ. 
ಭಾರತೀಯರ ಬಂಧನ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಅಹ್ಮದ್ ಜಾವೆದ್ ಅವರಿಗೆ ಟ್ವೀಟ್ ಮಾಡಿರುವ ಅವರು, ಜಾವೆದ್ ದಯವಿಟ್ಟು ಭಾರತೀಯ ಕಾರ್ಮಿಕರಿಗೆ ಸಹಾಯ ಮಾಡಿ. ಈ ಕುರಿತ ವರದಿಯನ್ನು ನನಗೆ ಹಾಗೂ ಮಿ.ಕೆ.ಟಿ ರಾಮ ರಾವ್ ಅವರಿಗೆ ಕಳುಹಿಸಿ ಎಂದು ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಐಟಿ ಮತ್ತು ಎನ್ಆರ್'ಐ ವ್ಯವಹಾರಗಳ ಸಚಿವ ಕೆ.ಟಿ ರಾಮ ರಾವ್ ಅವರು ಸುಷ್ಮಾ ಸ್ವರಾಜ್ ಅವರಿಗೆ ಪತ್ರವೊಂದನ್ನು ಬರೆದಿದ್ದರು. 
ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ 29 ಭಾರತೀಯರನ್ನು ಅಲ್ಲಿನ ಕಂಪನಿಯೊಂದು ಬಂಧನಕ್ಕೊಳಪಡಿಸಿದ್ದು, 12 ದಿನಗಳಿಂದಲೂ ಆಹಾರ, ನೀರು, ಅಗತ್ಯ ಸೌಕರ್ಯಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆಂದು ಪತ್ರದಲ್ಲಿ ಹೇಳಿದ್ದರು. 
ಸೌದಿ ಅರೇಬಿಯಾದ ಕಂಜಿ ಸಿಟಿಯಲ್ಲಿ ಭಾರತೀಯರನ್ನು ಬಂಧಿಸಲಾಗಿದೆ. ಭಾರತಕ್ಕೆ ಹೋಗುವ ಸಲುವಾಗಿ ಭಾರತೀಯರು ಕಂಪನಿ ಬಳಿ ರಜೆಯನ್ನು ಕೇಳಿದ್ದಾರೆ. ಇದಕ್ಕೆ ಕಂಪನಿ 50,000 ಡಾಲರ್ ನೀಡುವಂತೆ ತಿಳಿಸಿದೆ. ಅಲ್ಲದೆ, ಪ್ರಯಾಣದ ವೆಚ್ಚ ಭರಿಸಲು ನಿರಾಕರಿಸಿದೆ. ಹೀಗಾಗಿ ಭಾರತೀಯರು ನ್ಯಾಯಕ್ಕಾಗಿ ನ್ಯಾಯಾಲದ ಮೆಟ್ಟಿಲನ್ನು ಹತ್ತಿದ್ದಾರೆ. ಆದೇಶ ಹೊರಡಿಸಿದ್ದ ನ್ಯಾಯಾಲಯ ಭಾರತೀಯರಿಗೆ ಪ್ರಯಾಣದ ವೆಚ್ಚ ನೀಡಿ ಮೂರು ದಿನಗಳೊಳಗಾಗಿ ಭಾರತಕ್ಕೆ ಕಳುಹಿಸಿಕೊಡುವಂತೆ ಕಂಪನಿಗೆ ತಿಳಿಸಿದೆ. 
29 ಜನರ ಪೈಕಿ ಓರ್ವ ಭಾರತೀಯ ಬೊರಗಲ್ಲ ಶೇಖರ್ ಎಂಬುವವರು ತಮ್ಮ ಮನೆಯವರೊಂದಿಗೆ ಮಾತುಕತೆ ನಡೆಸಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಕಂಪನಿಯವರು ತಮ್ಮನ್ನು ಬಂಧನದಲ್ಲಿರಿಸಿದ್ದು, ತನ್ನೊಂದಿಗೆ ಇನ್ನೂ 28 ಭಾರತೀಯರು ಇದ್ದಾರೆಂದು ಹೇಳಿಕೊಂಡಿದ್ದಾರೆಂದು ರಾವ್ ಪತ್ರದಲ್ಲಿ ತಿಳಿಸಿದ್ದರು. 

Related Stories

No stories found.

Advertisement

X
Kannada Prabha
www.kannadaprabha.com