ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ನ್ಯಾ.ಸಿ.ಎಸ್.ಕರ್ಣನ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಯಾವುದೇ ಕ್ಷಣದಲ್ಲಾದರೂ ಬಂಧನಕ್ಕೊಳಪಡಿಸುವಂತೆ ಸೋಮವಾರ ಆದೇಶ ನೀಡಿದೆ.
ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಕರ್ಣನ್ ಅವರು ತುರ್ತು ಪರಿಶೀಲನೆ ನಡೆಸುವಂತೆ ಪದೇ ಪದೇ ಅರ್ಜಿ ಸಲ್ಲಿಸುತ್ತಿರುವುದಕ್ಕೆ ತೀವ್ರವಾಗಿ ಕೆಂಡಾಮಂಡಲವಾಗಿರುವ ಸುಪ್ರೀಂಕೋರ್ಟ್, ಕರ್ಣನ್ ಸಲ್ಲಿರುವ ಅರ್ಜಿಯನ್ನು ಯಾವುದೇ ಕಾರಣಕ್ಕೂ ವಿಚಾರಣೆಗೆ ಎತ್ತಿಕೊಳ್ಳುವುದಿಲ್ಲ ಎಂದು ಹೇಳಿದೆ.
ವಿವಾದಿತ ನ್ಯಾಯಮೂರ್ತಿ ಕರ್ಣನ್ ಅವರು ನ್ಯಾಯಾಂಗ ನಿಂದನೆ ಅಡಿಯಲ್ಲಿ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಶಿಕ್ಷೆಯನ್ನು ವಜಾಗೊಳಿಸುವಂತೆ ಕರ್ಣನ್ ಅವರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಕರ್ಣನ್ ಪರ ಅರ್ಜಿ ಸಲ್ಲಿಕೆ ಮಾಡಿದ ವಕೀಲ ಮ್ಯಾಥ್ಯೂ ನೆಡುಂಪರ ಅವರು ತುರ್ತು ಪರಿಶೀಲನೆ ನಡೆಸುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿದರು. ಕರ್ಣನ್ ಅವರು ಬೇಷರತ್ ಕ್ಷಮೆಯಾಚಿಸಲು ಇಚ್ಛಿಸುತ್ತಿದ್ದು, ನ್ಯಾಯಾಲಯ ಅವರ ಅರ್ಜಿಯನ್ನು ಪರಿಗಣಿಸುತ್ತಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ, ನ್ಯಾಯಾಲಯದ ಸಮಯವನ್ನು ಕರ್ಣನ್ ಅವರು ವ್ಯರ್ಥ ಮಾಡುತ್ತಿದ್ದು, ಸಮಯ ಬಂದಾಗಲೇ ಅರ್ಜಿಯನ್ನು ಪರಿಶೀಲನೆ ನಡೆಸುತ್ತೇವೆಂದು ತಿಳಿಸಿದೆ.