ಭೋಪಾಲ್: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಮಂಗಳವಾರ ಮೂವರ ಮೃತದೇಹ ಪತ್ತೆಯಾಗಿದ್ದು, ಆ ಪೈಕಿ ಓರ್ವನ ಶಿರಚ್ಛೇದ ಮಾಡಲಾಗಿದೆ ಮತ್ತು ತಲೆ ನಾಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರನ್ನು ಕತ್ತು ಸೀಳಿ ಕೊಲೆ ಮಾಡಲಾಗಿದ್ದು, ಈ ಬರ್ಬರ ಹತ್ಯೆಯ ಹಿಂದೆ ಮಂತ್ರವಾದಿ ಅಥವಾ ಮಾನಸಿಕ ಅಸ್ವಸ್ಥನ ಕೈವಾಡವಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಟ್ನಿ ಜಿಲ್ಲೆಯ ಚಪ್ರಾ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕಾಂತ್ ಶುಕ್ಲಾ ಅವರು ತಿಳಿಸಿದ್ದಾರೆ.
ಕೊಲೆಯಾದ ವ್ಯಕ್ತಿಗಳನ್ನು ಪುಸಿಯಾ ಬಾಯ್, ಜಗದೀಶ್ ಸಿಂಗ್ ರಜಪೂತ್ ಹಾಗೂ ಜಲಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಹತ್ಯೆಯಾದ ವ್ಯಕ್ತಿಗಳಿಂದ ದುಷ್ಕರ್ಮಿಗಳು ಯಾವುದೇ ವಸ್ತುಗಳನ್ನು ದೋಚಿಲ್ಲ ಎಂದು ಅವರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.