ಕುಲಭೂಷಣ್ ಜಾದವ್ ಪ್ರಕರಣದ ಮರು ಪರಿಶೀಲನೆಗೆ ಪಾಕಿಸ್ತಾನ ಅರ್ಜಿ
ಇಸ್ಲಾಮಾಬಾದ್: ಕುಲಭೂಷಣ್ ಜಾದವ್ ಪ್ರಕರಣವನ್ನು ಮರು ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಿ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ.
ಅಂತಿಮ ತೀರ್ಪು ಬರುವವರೆಗೂ ಪಾಕಿಸ್ತಾನಿ ಸೇನಾ ಕೋರ್ಟ್ ಘೋಷಿಸಿರುವ ಮರಣ ದಂಡನೆಯನ್ನು ಜಾರಿಗೊಳಿಸದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಗುರುವಾರ ತೀರ್ಪು ನೀಡಿತ್ತು. ಹೀಗಾಗಿ ಪ್ರಕರಣದ ಮರು ವಿಚಾರಣೆಗೆ ಪಾಕ್ ಕೋರಿಕೆ ಸಲ್ಲಿಸಿದೆ.
ಭಾರತದ ಕುಲಭೂಷಣ್ ಜಾದವ್ ಗೆ ಪಾಕಿಸ್ತಾನ ಮಿಲಿಟರಿ ಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಭಾರತದ ಪರ ತೀರ್ಪು ನೀಡಿತ್ತು. ಈ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಪಾಕಿಸ್ತಾನ ಸರ್ಕಾರದ ವಿರುದ್ಧ ಆ ದೇಶದ ಪ್ರಜೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅಂತಾರಾಷ್ಟೀಯ ಕೋರ್ಟ್ನಲ್ಲಿ ಕುಲಭೂಷಣ್ ಜಾಧವ್ ಪ್ರಕರಣವನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಕ್ಕೆ ಪಾಕ್ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿದೆ.
ಅಂತೆಯೇ ಪ್ರಕರಣದಲ್ಲಿ ಪಾಕಿಸ್ತಾನ ಸರ್ಕಾರ ಅಂತಾರಾಷ್ಟ್ರೀಯ ಕೋರ್ಟ್ ನ ವ್ಯಾಪ್ತಿಯನ್ನು ಒಪ್ಪಿಕೊಂಡಿದ್ದನ್ನು ಕೂಡ ತಜ್ಞರು ಪ್ರಶ್ನಿಸಿದ್ದಾರೆ.
ಖವಾರ್ ಖುರೇಷಿಯಿಂದಲೇ ವಾದ ಮಂಡನೆಗೆ ತೀರ್ಮಾನ?
ಮತ್ತೊಂದೆಡೆ ಕುಲಭೂಷಣ್ ಜಾಧವ್ ಮರಣ ದಂಡನೆ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಭಂಗ ಎದುರಿಸಿರುವ ಪಾಕಿಸ್ತಾನ, ತನ್ನ ವಕೀಲ ಖವಾರ್ ಖುರೇಷಿ ಅವರನ್ನು ಬದಲಿಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಸರ್ಕಾರಿ ಮೂಲಗಳು ತಿಳಿಸಿರುವಂತೆ ಈ ಹಿಂದೆ ವಾದ ಮಂಡಿಸಿದ ಖವಾರ್ ಖುರೇಷಿ ಅವರೇ ವಾದಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.