ಮುಜಾಫರ್ ಪುರ: ಬಿಹಾರದ ಪತ್ರಕರ್ತ ರಾಜದೇವ್ ರಂಜನ್ ಅವರ ಕೊಲೆ ಪ್ರಕರಣದಲ್ಲಿ ಸಿಬಿಐ ಆರ್ ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ನನ್ನು ಆರೋಪಿಯನ್ನಾಗಿ ಮಾಡಿದೆ.
ಸಿಬಿಐ ವಿಶೇಷ ಕೋರ್ಟ್ ಆದೇಶದ ಪ್ರಕಾರ, ಪತ್ರಕರ್ತನ ಕೊಲೆ ಪ್ರಕರಣ ಸಂಬಂಧ ಶಹಾಬುದ್ದೀನ್ ನನ್ನು ವೀಡಿಯೊ-ಕಾನ್ಫರೆನ್ಸಿಂಗ್ ಮೂಲಕ ವಿಶೇಷ ನ್ಯಾಯಾಧೀಶ ಅನುಪಮ್ ಕುಮಾರಿ ಅವರ ಮುಂದೆ ವಿಚಾರಣೆಗೆ ಹಾಜರುಪಡಿಸಲಾಗಿದೆ.
ರಾಜದೇವ್ ರಂಜನ್ ಕೊಲೆ ಪ್ರಕರಣದಲ್ಲಿ ಆರ್ ಜೆಡಿ ಮಾಜಿ ಸಂಸದ ಶಹಾಬುದ್ದೀನ್ 10ನೇ ಆರೋಪಿಯನ್ನಾಗಿ ಮಾಡಲಾಗಿದೆ.
ಪತ್ರಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಏಳು ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಸದ್ಯ ಭಾರಿ ಭದ್ರತೆಯಿರುವ ತಿಹಾರ್ ಜೈಲಿನಲ್ಲಿರುವ ಶಹಾಬುದ್ದೀನ್ ನ ವಿರುದ್ಧ ಶೀಘ್ರದಲ್ಲಿ ಚಾರ್ಜ್ ಶೀಟ್ ಸಲ್ಲಿಸುವುದಾಗಿ ಸಿಬಿಐ ಪರ ವಕೀಲರು ತಿಳಿಸಿದ್ದಾರೆ.
ಸಿವಾನ್ ನಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಮೊಹಮ್ಮದ್ ಶಹಾಬುದ್ದೀನ್ ಕಳೆದ ವರ್ಷ ಸಿವಾನ್ ನಲ್ಲಿ ನಡೆದ ಪ್ರಮುಖ ಹಿಂದಿ ದಿನಪತ್ರಿಕೆಯ ಪತ್ರಕರ್ತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.