ಕೊಟ್ಟಾಯಂ: ಕೇರಳ ಲವ್ ಜಿಹಾದ್ ಪ್ರಕರಣದಿಂದ ಇಡೀ ದೇಶದ ಗಮನ ಸೆಳೆದಿರುವ ಯುವತಿ ಹಾದಿಯಾ ಪೋಷಕರ ಬಳಿ ಸುರಕ್ಷಿತಳಾಗಿದ್ದಾಳೆಂದು ರಾಷ್ಟ್ರೀಯ ಮಹಿಳಾ ಆಯೋಗ ಸೋಮವಾರ ಹೇಳಿದೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಉಸ್ತುವಾರಿ ಹೊತ್ತಿರುವ ರೇಖಾ ಶರ್ಮಾ ಅವರು, ಈಗಷ್ಟೇ ಹಾದಿಯಾಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಆಕೆ ಪೋಷಕರೊಂದಿಗೆ ಸಂತೋಷವಾಗಿ ಹಾಗೂ ಆರೋಗ್ಯವಾಗಿದ್ದಾಳೆ. ಯಾರೂ ಅವಳಿಗೆ ಹಿಂಸೆಯನ್ನು ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಕೇರಳ ಹೈ ಕೋರ್ಟ್ 4 ತಿಂಗಳ ಹಿಂದಷ್ಟೇ ಹಾದಿಯಾಳನ್ನು ಆಕೆಯ ಪೋಷಕರಾದ ಕೆ.ಎಂ. ಅಶೋಕನ್ ಮತ್ತು ಪೊನ್ನಮ್ಮ ಅವರ ವಶಕ್ಕೆ ನೀಡಿತ್ತು.
ಹಾದಿಯಾಳನ್ನು ಗೃಹ ಬಂಧನದಲ್ಲಿ ಇಡುವ ಮೂಲಕ ಮಹಿಳಾ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕೇರಳದ ಕೆಲ ಮುಸ್ಲಿಂ ಸಂಘಟನೆಗಳು ಆರೋಪ ಮಾಡಿದ್ದವು.
ಆ ಆರೋಪಗಳ ಹಿನ್ನಲೆಯಲ್ಲಿ ರೇಖಾ ಅವರು ಸೋಮವಾರ ಕೊಟ್ಟಾಯಂನಲ್ಲಿರುವ ಹಾದಿಯಾಳ ಮನೆಗೆ ಭೇಟಿನೀಡಿ ಹಾದಿಯಾಳೊಂದಿಗೆ ಮಾತುಕತೆ ನಡೆಸಿದ್ದಾರೆ.