ದೇಶ
ಉ. ಪ್ರದಲ್ಲಿ ಬಿಜೆಪಿಗೆ ಮತ ಹಾಕಿ, ಇಲ್ಲದಿದ್ದರೆ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ: ಬೆದರಿಕೆ ಹಾಕಿದ ನಾಯಕ
ಬಿಜೆಪಿಗೆ ಮತ ಹಾಕದಿದ್ದರೆ ಕಷ್ಟಗಳನ್ನು ಎದುರಿಸಬೇಕಾಗಬಹುದು ಎಂದು ಬಿಜೆಪಿಯ ಸ್ಥಳೀಯ ನಾಯಕ ರಂಜೀತ್ ಕುಮಾರ್ ....
ಬರಬಂಕಿ: ಬಿಜೆಪಿಗೆ ಮತ ಹಾಕದಿದ್ದರೆ ಕಷ್ಟಗಳನ್ನು ಎದುರಿಸಬೇಕಾಗಬಹುದು ಎಂದು ಬಿಜೆಪಿಯ ಸ್ಥಳೀಯ ನಾಯಕ ರಂಜೀತ್ ಕುಮಾರ್ ಶ್ರೀವಾಸ್ತವ ಎಚ್ಚರಿಕೆ ನೀಡಿದ್ದಾರೆ. ಅವರು ಇತ್ತೀಚೆಗೆ ಬರಬಂಕಿಯಲ್ಲಿ ತಮ್ಮ ಪತ್ನಿ ಪರವಾಗಿ ಪ್ರಚಾರ ನಡೆಸುವಾಗ ಈ ಹೇಳಿಕೆ ನೀಡಿದ್ದಾರೆ. ಶ್ರೀವಾಸ್ತವ ಅವರ ಪತ್ನಿ ಬರಬಂಕಿ ಜಿಲ್ಲೆಯಲ್ಲಿ ಪಾಲಿಕೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಇಬ್ಬರು ಸಚಿವರಾದ ದಾರಾ ಸಿಂಗ್ ಚೌಹಾಣ್ ಮತ್ತು ರಾಮಾಪತಿ ಶಾಸ್ತ್ರಿ ಶ್ರೀವಾಸ್ತವ್ ಅವರು ವೇದಿಕೆ ಮೇಲೆ ಈ ಹೇಳಿಕೆ ನೀಡುವಾಗ ಉಪಸ್ಥಿತರಿದ್ದರು.
ಜನರಿಗೆ ತಮ್ಮ ಕೆಲಸಗಳು ಆಗಬೇಕೆಂದರೆ ಬಿಜೆಪಿ ಕಾರ್ಪೊರೇಟರ್ ಗಳಿಗೆ ಮತ ಹಾಕಬೇಕು. ಇಲ್ಲದಿದ್ದರೆ ಜನಪ್ರತಿನಿಧಿಗಳಿಂದ ನಿರೀಕ್ಷೆ ಇಟ್ಟುಕೊಳ್ಳಬಾರದು, ಮರೆಯಬೇಕು ಎಂದು ಹೇಳಿರುವ ವಿಡಿಯೊ ವೈರಲ್ ಆಗಿದೆ.
ಬಿಜೆಪಿಗೆ ಮತ ಚಲಾಯಿಸಿ ಎಂದು ತಾವು ಭಿಕ್ಷೆ ಬೇಡುತ್ತಿಲ್ಲ, ಆದರೆ ಬಿಜೆಪಿಗೆ ಮತ ಹಾಕಿದರೆ ಜನರು ಖುಷಿಯಾಗಿರುತ್ತಾರೆ ಎಂದು ಹೇಳುತ್ತೇನೆ ಎಂದಿದ್ದಾರೆ.
ತಾವು ಯಾರಿಗೂ ಬೆದರಿಕೆ ಹಾಕುತ್ತಿಲ್ಲ. ಮುಸಲ್ಮಾನರಿಗೂ ಬೆದರಿಕೆಯೊಡ್ಡುತ್ತಿಲ್ಲ. ಬದಲಿಗೆ ಅವರನ್ನು ಬಿಜೆಪಿಗೆ ಮತ ಹಾಕುವಂತೆ ಕೇಳಿಕೊಳ್ಳುತ್ತಿದ್ದೇನೆ. ಹಿಂದೂ ಮತ್ತು ಮುಸ್ಲಿಂರ ನಡುವೆ ಭಾರೀ ಅಂತರವಿದ್ದು ಈ ಅಂತರವನ್ನು ಕೊನೆ ಮಾಡಲು ತಾವು ಪ್ರಯತ್ನಿಸುತ್ತಿರುವುದಾಗಿ ಹೇಳಿದರು.