ರಾಂಚಿ: ಜಾರ್ಖಾಂಡ್ ನಲ್ಲಿ ನಡೆದ ಹಸಿವಿನಿಂದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಬಾಲಕಿಯ ತಾಯಿಯನ್ನೇ ಗ್ರಾಮಸ್ಥರು ಊರಿನಿಂದ ಹೊರಗೆ ಹಾಕಿದ್ದಾರೆಂದು ತಿಳಿದುಬಂದಿದೆ.
ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಎಂಬ ಕಾರಣಕ್ಕೆ ರೇಷನ್ ನೀಡಿದ ಕಾರಣ ಹಸಿವಿನಿಂದಾಗಿ 11 ವರ್ಷದ ಬಾಲಕಿಯೊಬ್ಬಳು ಸೆ.28 ಸಾವನ್ನಪ್ಪಿದ್ದಳು. ಈ ಪ್ರಕರಣ ಸುದ್ದಿಗೆ ಗ್ರಾಸವಾಗಿತ್ತು.
ಪ್ರಕರಣದಿಂದಾಗಿ ಗ್ರಾಮದ ಹೆಸರು ಹಾಳಾಗುತ್ತಿದೆ ಎಂಬ ಕಾರಣಕ್ಕೆ ಇದೀಗ ಗ್ರಾಮದ ಪಂಚಾಯಿತಿ ಸದಸ್ಯರು ಸಂತ್ರಸ್ತ ಬಾಲಕಿಯ ತಾಯಿಯನ್ನು ಊರಿನಿಂದ ಹೊರಹಾಕಿದ್ದಾರೆಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಪ್ರಕರಣದ ಬಳಿಕ ಕೆಲ ಸ್ಥಳೀಯರು ಮಹಿಳೆಯಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಆರೋಪಿಸಿದ್ದಾರೆ. ಬಳಿಕ ಆಕೆಯನ್ನು ಊರಿನಿಂದ ಹೊರಗೆ ಹಾಕಿದ್ದಾರೆ. ಗ್ರಾಮಸ್ಥರ ವರ್ತನೆಯಿಂದ ಭಯಭೀತಳಾಗಿರುವ ಮಹಿಳೆ ಇದೀಗ ಪಂಚಾಯಿತಿ ಕಟ್ಟಡದಲ್ಲಿ ವಾಸವಿದ್ದಾರೆಂದು ಹೇಳಲಾಗುತ್ತಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಮ್ದೆಗಾ ಜಿಲ್ಲಾಧಿಕಾರಿಗಳು ಪ್ರಕರಣ ಸಂಬಂಧ ವಿಚಾರಣೆ ನಡೆಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.