ಹೈದರಾಬಾದ್(ತೆಲಂಗಾಣ): ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಬಾಲಕನ ಹತ್ಯೆ ಘಟನೆ ದೇಶಾದ್ಯಂತ ಇನ್ನೂ ಸದ್ದು ಮಾಡುತ್ತಿರುವಾಗ ತೆಲಂಗಾಣದಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಸರಿಯಾದ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಬರಲಿಲ್ಲವೆಂದು 11 ವರ್ಷದ ಬಾಲಕಿಯನ್ನು ಬಾಲಕರು ಬಳಸುವ ಶೌಚಾಲಯದಲ್ಲಿ ನಿಲ್ಲಿಸಿ ಶಿಕ್ಷಕಿ ಕಠೋರ ಶಿಕ್ಷೆ ನೀಡಿದ್ದಾರೆ.
ಘಟನೆ ಬಗ್ಗೆ ಅಳುತ್ತಾ ವಿವರಿಸಿದ ಬಾಲಕಿ, ನಾನು ತರಗತಿಗೆ ಹೋದಾಗ ನನ್ನ ದೈಹಿಕ ಶಿಕ್ಷಕಿ ನನ್ನನ್ನು ತಡೆದು ನಿಲ್ಲಿಸಿ ಯೂನಿಫಾರ್ಮ್ ಬಗ್ಗೆ ವಿಚಾರಿಸಿದರು. ನನ್ನ ತಾಯಿ ಯೂನಿಫಾರ್ಮ್ ತೊಳೆದು ಹಾಕಿರುವುದರಿಂದ ಧರಿಸಿಕೊಂಡು ಬರಲು ಸಾಧ್ಯವಾಗಲಿಲ್ಲ ಎಂದು ನಾನು ಹೇಳಿದೆ. ಇದಕ್ಕೆ ನನ್ನ ತಂದೆ-ತಾಯಿ ಶಾಲೆಯ ಡೈರಿಯಲ್ಲಿ ಬರೆದು ಕೊಟ್ಟಿದ್ದಾರೆ ಎಂದು ಹೇಳಿದೆ. ಆದರೆ ಶಿಕ್ಷಕಿ ನನ್ನ ಮಾತು ಕೇಳಲಿಲ್ಲ. ಬೊಬ್ಬೆ ಹಾಕುತ್ತಾ ನನ್ನನ್ನು ಹುಡುಗರು ಬಳಸುವ ಶೌಚಾಲಯಕ್ಕೆ ನೂಕಿ ಅಲ್ಲಿ ಕೆಲ ಹೊತ್ತು ನಿಲ್ಲುವಂತೆ ಹೇಳಿದರು ಎಂದು ಹೇಳಿದ್ದಾಳೆ.
ನಾಲ್ಕನೇ ತರಗತಿಯ ಮಕ್ಕಳು ನನ್ನನ್ನು ನೋಡಿ ನಕ್ಕರು, ಕೆಲ ಹೊತ್ತಿನ ಬಳಿಕ ದೈಹಿಕ ಶಿಕ್ಷಕಿ ಮತ್ತೆ ತರಗತಿಗೆ ಹೋಗುವಂತೆ ಹೇಳಿದರು. ಮತ್ತೆ ಇಂತಹ ತಪ್ಪು ಮಾಡದಂತೆ ಹೇಳಿದರು. ನಂತರ ಬೇರೆ ಶಿಕ್ಷಕಿಯರೊಂದಿಗೆ ಈ ವಿಷಯ ಕುರಿತು ಚರ್ಚೆ ನಡೆಸಿದರು. ನನಗೆ ಅವಮಾನವಾಗಿದ್ದು ಶಾಲೆಗೆ ಹೋಗುವುದಿಲ್ಲವೆಂದು ತೀರ್ಮಾನಿಸಿದ್ದೇನೆ ಎಂದು ಬಾಲಕಿ ಹೇಳಿದ್ದಾಳೆ.
ಈ ಘಟನೆ ಬಳಿಕ ಅನೇಕ ಮಕ್ಕಳ ಹಕ್ಕು ಕಾರ್ಯಕರ್ತರು ಶಾಲೆ ಮತ್ತು ಶಿಕ್ಷಕಿ ವಿರುದ್ಧ ಕೇಸು ದಾಖಲಿಸುವಂತೆ ಒತ್ತಾಯಿಸುತ್ತಿದ್ದಾರೆ.
Advertisement