ಭಾರತ್ ಬಂದ್ ಕರೆ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಬಂದ್ ಹಿನ್ನಲೆಯಲ್ಲಿ ರಾಜ್ಯದ ಸಾರ್ವಜನಿಕ ಬಸ್ ಗಳು ರಸ್ತೆಯಲ್ಲಿ ಸಂಚಾರ ನಡೆಸುವುದಿಲ್ಲ. ಕರೆಗಳನ್ನು ಹೊರತುಪಡಿಸಿ, 2ಜಿ, 3ಜಿ, 4ಜಿ ಹಾಗೂ ಸಿಡಿಎಂಎ, ಎಸ್ಎಂಎಸ್ ಸೇವೆಗಳು, ಡೋಂಗಲ್ ಸೇರಿ ಎಲ್ಲಾ ರೀತಿಯ ಸೇವೆಗಳನ್ನು ಏ.1ರ ಸಂಜೆ 5 ರಿಂದ ಏಪ್ರಿಲ್ 2 ರಾತ್ರಿ 11ರವರೆಗೂ ಬಂದ್ ಮಾಡಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಪಂಜಾಬ್ ರಾಜ್ಯ ಶಿಕ್ಷಣ ಇಲಾಖೆ ಕೂಡ ಪರೀಕ್ಷೆಗಳನ್ನು ಮುಂದೂಡಿದೆ. ಸಿಬಿಎಸ್ಇ ಮತ್ತು ಐಸಿಎಸ್ಇ ಪರೀಕ್ಷೆಗಳನ್ನು ಮಾತ್ರ ವೇಳಾಪಟ್ಟಿಯನ್ವಯ ನಡೆಸಲಾಗುತ್ತಿದೆ. ಈಗಾಗಲೇ ಮುಂದೂಡಿರುವ ಪರೀಕ್ಷೆಗಳ ದಿನಾಂಕವನ್ನು ಶೀಘ್ರದಲ್ಲಿಯೇ ಘೋಷಣೆ ಮಾಡಲಾಗುತ್ತದೆ. ಈ ಕುರಿತ ಸಂದೇಶವನ್ನು ಎಲ್ಲಾ ಜಿಲ್ಲಾ ಶಿಕ್ಷಣ ಅಧಿಕಾರಿಗಳೂ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಹಿತಕರ ಘಟನೆಗಳನ್ನುೋ ನಡೆಯದಂತೆ ಎಚ್ಚರಿಕೆ ವಹಿಸಿರುವ ಪಂಜಾಬ್ ರಾಜ್ಯ ಸರ್ಕಾರ, ರಾಜ್ಯದ ಪೊಲೀಸರು ಸೇರಿದಂತೆ ಹೆಚ್ಚುವರಿಯಾಗಿ 12,000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ.
ಎಸ್'ಟಿ/ಎಸ್'ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣಗಳನ್ನು ತಕ್ಷಣವೇ ದಾಖಲಿಸಬೇಕು ಮತ್ತು ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂಬ ನಿಯಮವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ತೀರ್ಪೊಂದನ್ನು ನೀಡಿತ್ತು. ತೀರ್ಪು ಸಂಬಂಧಿಸಿ ಕಳೆದ ವಾರ ಕೇಂದ್ರ ಸಚಿವರುಗಳಾದ ರಾಮ್ ವಿಲಾಸ್ ಪಾಸ್ವಾನ್ ಮತ್ತು ಥಾವರ್ ಚಂದ್ ಗೆಹ್ಲೋಟ್ ನೇತೃತ್ವದ ಎನ್'ಡಿಎ ಸಂಸದರ ನಿಯೋಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು.