ದೇಶ
ಕಾಂಗ್ರೆಸ್ ಇಲ್ಲದೆ ರೈತರು ಬದುಕುಳಿಯುವುದಿಲ್ಲ; ಜನಾಕ್ರೋಶ ರ್ಯಾಲಿಯಲ್ಲಿ ರಾಹುಲ್ ಗಾಂಧಿ
ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಜನಾಕ್ರೋಶ ರ್ಯಾಲಿಯಲ್ಲಿ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು...
ನವದೆಹಲಿ; ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಜನಾಕ್ರೋಶ ರ್ಯಾಲಿಯಲ್ಲಿ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಮೋದಿಯವರು ಜನರಿಗೆ ಸುಳ್ಳು ಹಾಗೂ ಟೊಳ್ಳು ಭರವಸೆಗಳನ್ನು ನೀಡಿ ಮೋಸ ಮಾಡಿದ್ದಾರೆಂದು ಭಾನುವಾರ ಹೇಳಿದ್ದಾರೆ.
ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪಕ್ಷದ 2 ಲಕ್ಷ ಕಾರ್ಯಕರ್ತರನ್ನುದ್ದೇಶಿ ಮಾತನಾಡಿರುವ ಅವರು, ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಪ್ರಧಾನಿ ಮೋದಿಯವರು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಮೋದಿಯವರು ವಿಫಲರಾಗಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿಯ ಕಥೆ ಏನಾಯಿತು? ಕಪ್ಪು ಹಣವನ್ನು ಭಾರತಕ್ಕೆ ತರುವ ಕಥೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ.
ನ್ಯಾಯಮೂರ್ತಿ ಲೋಯಾ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ಮಾತನಾಡಲು ಆರಂಭಿಸಿದ್ದಾಗ ಮೋದಿಯವರೇಕೆ ಮೌನವಾಗಿದ್ದರು. ಆರ್ಥಿಕ ಅಪರಾಧಿಗಳಾದ ನೀರವ್ ಮೋದಿಯವರ ಬಗ್ಗೆ ಜನರು ಪ್ರಶ್ನ ಮಾಡಿದಾಗೇಕೆ ಮೌನವಾಗಿದ್ದರು? ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ದಾಳಿಗಳು ನಡೆಯುತ್ತಿವೆ. ಸಂಸತ್ತು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಬಿಡಲಿಲ್ಲ. ಇಂದು ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅದನ್ನು ಸಂರಕ್ಷಿಸಲು ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು.
ದೇಶದ ರೈತರನ್ನು ಸಂರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫಲಗೊಂಡಿದೆ. ರೈತರ ಸಾಲ ಮನ್ನಾ ಮಾಡುವುದು ಬಿಜೆಪಿಯ ನೀತಿಯಲ್ಲ ಎಂದು ಈ ಹಿಂದೆಯೇ ಅರುಣ್ ಜೇಟ್ಲಿ ಹೇಳಿದ್ದಾರೆ. ಕಾಂಗ್ರೆಸ್ ಇಲ್ಲದೆಯೇ ದೇಶದ ರೈತರು ಬದುಕುಳಿಯುವುದು ಸಾಧ್ಯವೇ ಇಲ್ಲ ಎಂದಿದ್ದಾರೆ.
ಬಳಿಕ ಆರ್'ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, ಆರ್'ಎಸ್ಎಸ್ ಸಂಸ್ಥೆಗೆ ನಿಷ್ಠಾವಂತರಂತಿರುವ ಜನರು ಪ್ರಮುಖ ಸಂಸ್ಥೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆಂದಿದ್ದಾರೆ.
ಬಳಿಕ ಮಾತನಾಡಿರುವ ಸೋನಿಯಾ ಗಾಂಧಿಯವರು, ಅಧಿಕಾರಕ್ಕೆ ಬರುವಾಗ ಮೋದಿಯವರು 'ನಾ ಖಾವೂಂಗಾ ನಾ ಖಾನೆ ದೂಂಗಾ' (ನಾನು ತಿನ್ನುವುದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ) ಎಂದು ಹೇಳುತ್ತಿದ್ದರು. ಆದರೆ, ದೇಶದಲ್ಲಿಂದು ಭ್ರಷ್ಟಾಚಾರ ಹೆಚ್ಚಾಗಿದೆ. ಇಂದು ದೇಶದಲ್ಲಿ ಅಸತ್ಯ ಹಾಗೂ ಅನ್ಯಾಯ ತಾಂಡವವಾಡುತ್ತಿದೆ. ಇವುಗಳ ವಿರುದ್ಧ ದನಿಯೆತ್ತುವವರು ಮೋದಿ ಸರ್ಕಾರ ಕೋಪಕ್ಕೆ ಗುರಿಯಾಗಬೇಕಿದೆ ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಾತನಾಡಿ, ಆಡಳಿತಾರೂಢ ಎನ್ ಡಿಎ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡಿ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿತ್ತು. ಆದರೆ, ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಡದೆ ಹತ್ತಿಕ್ಕುವ ಪ್ರಯತ್ನ ಮಾಡಿತು. ಸಂವಿಧಾನಕ್ಕೆ ಪ್ರಜಾಪ್ರಭುತ್ವ ಉಡುಗೊರೆಯಾಗಿದೆ. ಅದನ್ನು ಸಂರಕ್ಷಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದಿದ್ದಾರೆ.