ಚೆನ್ನೈ : ವಿಗ್ರಹ ಕಳವು ಪ್ರಕರಣದಲ್ಲಿ ಟಿವಿಎಸ್ ಮೋಟಾರ್ ಕಂಪನಿ ಮುಖ್ಯಸ್ಥ ವೇಣು ಶ್ರೀನಿವಾಸನ್ ಅವರನ್ನು ಆರು ವಾರಗಳ ಕಾಲ ಬಂಧಿಸುವುದಿಲ್ಲ ಎಂದು ತಮಿಳುನಾಡು ಪೊಲೀಸ್ ವಿಗ್ರಹ ವಿಭಾಗ ಮೈದ್ರಾಸ್ ಹೈಕೋರ್ಟ್ ಗೆ ಹೇಳಿಕೆ ನೀಡಿದೆ.
ನ್ಯಾಯಾಧೀಶರಾದ ಆರ್ ಮಹದೇವನ್ ಹಾಗೂ ಪಿ.ಡಿ. ಆದಿಕೇಶವಲು ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ವಿಗ್ರಹ ಕಳವು ಪ್ರಕರಣದ ವಿಚಾರಣೆ ನಡೆಯಿತು
ಶ್ರೀನಿವಾಸನ್ ಪರ ಹಿರಿಯ ವಕೀಲ ಬಿ. ಕುಮಾರ್ ವಾದ ಮಂಡಿಸಿದರು. ನ್ಯಾಯಾಲಯದಲ್ಲಿದ್ದ ವಿಗ್ರಹದ ವಿಶೇಷ ತನಿಖಾ ತಂಡದ ಸಿಬ್ಬಂದಿಗಳು ಈ ಹೇಳಿಕೆ ನೀಡಿದರು. ಈ ಹೇಳಿಕೆ ನಂತರ ನ್ಯಾಯಪೀಠ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿತು.
ವಿಗ್ರಹ ಕಳವು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಶ್ರೀನಿವಾಸನ್ ನಿನ್ನೆ ಅರ್ಜಿ ಸಲ್ಲಿಸಿದ್ದರು. ತನ್ನ ಜಾಮೀನು ಅರ್ಜಿಯಲ್ಲಿ ಶ್ರೀನಿವಾಸನ್ ವಿರುದ್ಧ ಎಫ್ಐಆರ್ ಹಾಕಿರುವ ವಕೀಲ ಎಲಿಫೆಂಟ್ ಜಿ ರಾಜೇಂದ್ರನ್ ಸಲ್ಲಿಸಿದ ರಿಟ್ ಅರ್ಜಿಯನ್ನು ಉಲ್ಲೇಖಿಸಿದ್ದಾರೆ.
ಮೈಲಾಪೊರ್ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು, ನಂತರ ಸಿಬಿ- ಸಿಐಡಿ ವಿಗ್ರಹ ವಿಭಾಗಕ್ಕೆ ವರ್ಗಾಯಿಸಿದ್ದಾರೆ ಎಂದು ಶ್ರೀನಿವಾಸನ್ ಹೇಳಿದ್ದಾರೆ. ಕಪಾಲೀಶ್ವರ ದೇವಾಸ್ಥನದಲ್ಲಿ ಇಟ್ಟಿದ್ದ ಪುರಾತನ ನವಿಲು ವಿಗ್ರಹವನ್ನು ಶ್ರೀನಿವಾಸನ್ ಬದಲಾಯಿಸಿದ್ದಾರೆ ಎಂದು ಭಕ್ತಾಧಿ ರಂಗರಾಜನ್ ನರಸಿಂಹನ್ ದೂರು ನೀಡಿದ್ದಾರೆ ಎಂದು ರಾಜೇಂದ್ರನ್ ಹೇಳಿದ್ದಾರೆ.
ಈ ಆರೋಪವನ್ನು ಉದ್ಯಮಿ ಶ್ರಿನಿವಾಸನ್ ಅಲ್ಲಗಳೆದಿದ್ದಾರೆ. ದೇವಾಲಯಕ್ಕೆ ಬಣ್ಣ ಬಳಿಸಲು ತನ್ನ ವೈಯಕ್ತಿಕ ನಿಧಿಯಿಂದ 2004ರಲ್ಲಿ 70 ಲಕ್ಷ ರೂಪಾಯಿ ವೆಚ್ಚ ಮಾಡಿದ್ದೇನೆ. ನಾನು ಮುಗ್ದ ಎಂದು ಶ್ರೀನಿವಾಸನ್ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.
ತಾನೂ ಕೂಡಾ ಕಪಾಲೀಶ್ವರ ಭಕ್ತನಾಗಿದ್ದೇನೆ , ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಸಂಬಂಧವಿಲ್ಲ . ತಿರುಚಿರಪ್ಪಳ್ಳಿಯ ರಂಗನಾಥಸ್ವಾಮಿ ದೇವಾಲಯ ಟ್ರಸ್ಟ್ ಮಂಡಳಿಯ ಮುಖ್ಯಸ್ಥನಾಗಿ 2015ರಲ್ಲಿ ಸುಮಾರು 25 ಕೋಟಿ ರೂಪಾಯಿಯನ್ನು ದೇವಾಲಯ ನವೀಕರಣಕ್ಕಾಗಿ ವೆಚ್ಚಮಾಡಿರುವುದಾಗಿ ಶ್ರೀನಿವಾಸನ್ ಹೇಳಿಕೆ ನೀಡಿದ್ದಾರೆ.
ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ತಮ್ಮ ಕಂಪನಿ ಕಡೆಯಿಂದ ಸುಮಾರು 100 ದೇವಾಲಯಗಳ ನವೀಕರಣ ಮಾಡಿರುವುದಾಗಿ ಶ್ರೀನಿವಾಸನ್ ಹೇಳಿದ್ದಾರೆ. ತಮ್ಮ ವಿರುದ್ಧದ ಆರೋಪ ಹಾಗೂ ಎಫ್ ಐಆರ್ ಹಿನ್ನೆಲೆಯಲ್ಲಿ ನಿರೀಕ್ಷಿತ ಜಾಮೀನು ನೀಡಬೇಕೇಂದು ಶ್ರೀನಿವಾಸನ್ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡರು.
Advertisement