ನವದೆಹಲಿ: ಪುಷ್ಪಾಲಂಕೃತಗೊಂಡಿರುವ ಸೇನಾ ವಾಹನದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಸಾಗಿದೆ.
ದೆಹಲಿಯ ಕೃಷ್ಣಮೆನನ್ ರಸ್ತೆಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಮನೆಯಿಂದ ಅಂತಿಮ ಯಾತ್ರೆ ಆರಂಭಗೊಂಡಿದೆ. ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕೃಷ್ಣಮೆನನ್ ಮಾರ್ಗ್, ಸುನೇರಿ ಭಾಗ್ ರಸ್ತೆ, ತುಘಲಕ್ ರಸ್ತೆ, ತೀಸ್ ಹಜಾರಿ ರಸ್ತೆ, ಜನಪಥ್ ರಸ್ತೆ ಮಾನ್ ಸಿಂಗ್ ರಸ್ತೆ, ಶಹಜಹಾನ್ ರಸ್ತೆ, ರಾಜಪತ್ ರಸ್ತೆ, ತಿಲಕ್ ರಸ್ತೆ ಮೂಲಕ ಪಾರ್ಥಿವ ಶರೀರದ ಅಂತಿಮ ಯಾತ್ರೆ ಬಿಜೆಪಿ ಕೇಂದ್ರ ಕಚೇರಿಗೆ ತಲುಪಲಿದೆ.
ಅಂತಿಮ ಯಾತ್ರೆ ಸಾಗುತ್ತಿರುವ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು ಅಟಲ್ ಬಿಹಾರಿ ಅಮರ್ ರಹೇ, ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಾ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಅಂತಿಮ ದರ್ಶನದ ಬಳಿಕ ದೆಹಲಿಯ ರಾಜ್ ಘಾಟ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ವಿಧಿವಿಧಾನ ನೆರವೇರಲಿದೆ.