ಲಖನೌ: ಸ್ವಾತಂತ್ರ್ಯ ದಿನಾಚರಣೆ ದಿನ ಮಕ್ಕಳಿಗೆ ರಾಷ್ಟ್ರಗೀತೆ ಹಾಡಲು ಅಡ್ಡಿಪಡಿಸಿದ ಮದರಸದ ಮಾನ್ಯತೆಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಪಡಿಸಿ ಆದೇಶ ಹೊರಡಿಸಿದೆ.
ಮಹಾರಾಜಗಂಜ್ ನ ಮದರಸದಲ್ಲಿ ಪ್ರಾಂಶುಪಾಲರು ಹಾಗೂ ಧರ್ಮಗುರು ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ವೇಳೆ ರಾಷ್ಟ್ರಗೀತೆ ಹಾಡುವುದಕ್ಕೆ ಅಡ್ಡಿಪಡಿಸಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಮದರಸ ಎಜುಕೇಶನ್ ಬೋರ್ಡ್ ನ ರಿಜಿಸ್ಟ್ರಾರ್ ಎಸ್ ಎನ್ ಪಾಂಡೆ ಅವರು ಮದರಸಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಹಣಕಾಸು ನೆರವು ಇತ್ಯಾದಿಗಳನ್ನು ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ನಡೆಸಿದ ತನಿಖೆಯ ಆಧಾರದ ಮೇಲೆ ಮಹಾರಾಜಗಂಜ್ ಜಿಲ್ಲೆಯಲ್ಲಿರುವ ಮಲಾಂಗ್ಡಿಹ್ನ ಅರೇಬಿಯಾ ಅಹ್ಲೆ ಸುನ್ನತ್ ಅನ್ವಾರೆ ತಯ್ಯಬ ಗರ್ಲ್ಸ್ ಕಾಲೇಜಿನ ಮಾನ್ಯತೆ ರದ್ದುಗೊಳಿಸಲಾಗಿದೆ.
ರಾಷ್ಟ್ರಗೀತೆ ಹಾಡುವ ವೇಳೆ ಪ್ರಾಂಶುಪಾಲ ಫೈಯಾಸ್ ರೆಹ್ಮಾನ್ ಹಾಗೂ ಧರ್ಮಗುರು ಜುನೈದ್ ಅನ್ಸಾರಿ ಅಡ್ಡಿಪಡಿಸಿದ್ದರು. ಇದಕ್ಕೆ ಮದರಸದ ವಿಜ್ಞಾನ ಶಿಕ್ಷಕ ಸುನಿಲ್ ತ್ರಿಪಾಟಿ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದರು.