ಮುಂಬೈ: ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಮದುಮಗನನ್ನು ಇದೀಗ ಮೊಬೈಲ್ ಕದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈನ ಚೇಂಬುರ್ ನ ಅಮರ್ ಜಂಕ್ಷನ್ ನಲ್ಲಿ ಮಹಿಳೆ ತನ್ನ ಮಗಳ ಜತೆ ಹೋಗುತ್ತಿದ್ದಾಗ ಬಂಧಿತನಾಗಿರುವ ಅಜಯ್ ಸುನೀಲ್ ದೋತೆ ತನ್ನ ಸ್ನೇಹಿತನ ಜತೆ ಬೈಕಿನಲ್ಲಿ ಬಂದು ಮೊಬೈಲ್ ಕದ್ದು ಪರಾರಿಯಾಗಿದ್ದ.
ಈ ಸಂಬಂಧ ಮಹಿಳೆ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಹಿಳೆಯ ದೂರಿನನ್ವಯ ಪೊಲೀಸರು ತನಿಖೆ ಶುರು ಮಾಡಿದ್ದು ಮದುಮಗ ಅಜಯ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.
ಅಜಯ್ ಹಾಗೂ ಆತನ ಸ್ನೇಹಿತ ಕಳ್ಳತನಕ್ಕೆ ಬಳಸುತ್ತಿದ್ದ ಬೈಕ್ ನಂಬರ್ ಅನ್ನು ಕಪ್ಪು ಬಣ್ಣದಿಂದ ಮರೆಮಾಚಿಸಿದ್ದರು. ಆದರೆ ವಿಚಾರಣೆ ವೇಳೆ ಸಿಸಿಟಿವಿ ಪರಿಶೀಲಿಸಿದಾಗ ಅದು ಅಜಯ್ ಬೈಕ್ ಎಂಬುದು ಪತ್ತೆಯಾಗಿದೆ.
ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಲು ಬಾಂದ್ರಾದಲ್ಲಿರುವ ಅಜಯ್ ನ ಮನೆಗೆ ಹೋಗಿದ್ದಾರೆ. ಈ ವೇಳೆ ಮದುವೆ ನಡೆಯುತ್ತಿದೆ ಎಂದು ತಿಳಿದ ಪೊಲೀಸರು ಮದುವೆ ಮನೆಗೆ ಹೋಗಿ ಹಸೆಮಣೆಯಲ್ಲಿದ್ದ ವರ ಅಜಯ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.