ದೇಶ
ಕಾರ್ಯತಂತ್ರ ವಿಷಯಗಳ ಕುರಿತು ಚರ್ಚಿಸಲು ಸೇನಾ ಮುಖ್ಯಸ್ಥರು ಭೂತಾನ್ ಗೆ ರಹಸ್ಯ ಭೇಟಿ
ದೋಕ್ಲಮ್ ನಲ್ಲಿ ಮತ್ತೆ ಚೀನಾ ತನ್ನ ಶಕ್ತಿ ಪ್ರದರ್ಶನ ಮಾಡಲು ತೋರಿಸುತ್ತಿರುವ ಹಿನ್ನೆಲೆಯಲ್ಲಿ
ನವದೆಹಲಿ: ದೋಕ್ಲಮ್ ನಲ್ಲಿ ಮತ್ತೆ ಚೀನಾ ತನ್ನ ಶಕ್ತಿ ಪ್ರದರ್ಶನ ಮಾಡಲು ತೋರಿಸುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕಾರ್ಯತಂತ್ರ ವಿಷಯಗಳ ಕುರಿತು ಚರ್ಚೆ ನಡೆಸಲು ಈ ತಿಂಗಳ ಆರಂಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕ್ಷಿಪ್ರ ಮತ್ತು ರಹಸ್ಯವಾಗಿ ಭೂತಾನ್ ಗೆ ಭೇಟಿ ನೀಡಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಸಂದರ್ಭದಲ್ಲಿ ಭೂತಾನ್ ನ ಪ್ರಮುಖ ನಾಯಕರೊಂದಿಗೆ ದೊಕ್ಲಾಮ್ ವಿಷಯ ಸೇರಿದಂತೆ ಅನೇಕ ಕಾರ್ಯತಂತ್ರ ವಿಷಯಗಳನ್ನು ಚರ್ಚೆ ನಡೆಸಿದ್ದಾರೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.
ಭಾರತ ಮತ್ತು ಭೂತಾನ್ ರಾಷ್ಟ್ರಗಳು ದ್ವಿಪಕ್ಷೀಯ ಭದ್ರತೆ ಮತ್ತು ರಕ್ಷಣಾ ಸಹಕಾರ ವಿಷಯಗಳ ಕುರಿತು ಚರ್ಚೆ ನಡೆಸಿದ್ದು, ದೊಕ್ಲಮ್ ನಲ್ಲಿ ಚೀನಾ ದೇಶದ ಮಿಲಿಟರಿ ಸೇನೆ ನಿಯೋಜನೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದವು. ಫೆಬ್ರವರಿ 6 ಮತ್ತು 7ರಂದು ಭಾರತದ ಅಧಿಕಾರಿಗಳು ಭೇಟಿ ಮಾಡಿದ್ದು, ಚರ್ಚೆಯಲ್ಲಿ ಫಲದಾಯಕ ಫಲಿತಾಂಶ ಹೊರಬಂದವು ಎದು ಮೂಲಗಳು ತಿಳಿಸಿವೆ.
ಚೀನಾದ ದೊಕ್ಲಮ್ ನಿಲುವಿನ ನಂತರ ಭಾರತದ ಉನ್ನತ ಮಟ್ಟದ ಅಧಿಕಾರಿಗಳು ಇದೇ ಮೊದಲ ಬಾರಿಗೆ ಭೂತಾನ್ ಗೆ ಭೇಟಿ ನೀಡಿದ್ದು, ಎರಡೂ ದೇಶಗಳ ಸರ್ಕಾರಗಳು ಈ ವಿಷಯವನ್ನು ಗುಪ್ತವಾಗಿಟ್ಟುಕೊಂಡಿತ್ತು. ಗುವಾಹಟಿಯಲ್ಲಿ ಹೂಡಿಕೆ ಶೃಂಗಸಭೆಯ ಹೊರಗೆ ಪ್ರಧಾನಿ ನರೇಂದ್ರ ಮೋದಿ ಭೂತಾನ್ ಪ್ರಧಾನಿ ಟ್ಶೆರಿಂಗ್ ತೊಬ್ಗೆ ಅವರ ಜೊತೆ ಮಾತುಕತೆ ನಡೆಸಿದ ಮೂರು ದಿನಗಳ ನಂತರ ಈ ಭೇಟಿ ನಡೆದಿದೆ.