ಬಲಿಷ್ಠ ರಾಷ್ಟ್ರದೊಂದಿಗೆ ಮೈತ್ರಿ: ಭಾರತದ ಕುರಿತು ಇಸ್ರೇಲ್ ಪ್ರಧಾನಿ ನೇತಾನ್ಯಹು

ಭಾರತ ಮತ್ತು ಇಸ್ರೇಲ್ ದೇಶಗಳು ಬಲಿಷ್ಟ ರಾಷ್ಟ್ರಗಳಾಗಿದ್ದು, ಭವಿಷ್ಯದಲ್ಲಿ ನಮ್ಮ ಸ್ನೇಹ ಮತ್ತಷ್ಟು ಗಾಢವಾಗಲಿದೆ ಎಂದು ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತ ಮತ್ತು ಇಸ್ರೇಲ್ ದೇಶಗಳು ಬಲಿಷ್ಟ ರಾಷ್ಟ್ರಗಳಾಗಿದ್ದು, ಭವಿಷ್ಯದಲ್ಲಿ ನಮ್ಮ ಸ್ನೇಹ ಮತ್ತಷ್ಟು ಗಾಢವಾಗಲಿದೆ ಎಂದು ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಹೇಳಿದ್ದಾರೆ.
ನಿನ್ನೆ ಆಗ್ರಾದ ತಾಜ್ ಮಹಲ್ ಗೆ ಪತ್ನಿ ಸಮೇತ ಭೇಟಿ ನೀಡಿದ್ದ ನೇತಾನ್ಯಹು ಸಿಎಂ ಯೋಗಿ ಆದಿತ್ಯಾನಾಥ್ ಅವರೊಂದಿಗೆ ತಾಜ್ ಮಹಲ್ ವೀಕ್ಷಣೆ ಮಾಡಿದರು. ಬಳಿಕ ದೆಹಲಿಗೆ ಆಗಮಿಸಿದ ಇಸ್ರೇಲ್ ಪ್ರಧಾನಿ ನೇತಾನ್ಯಹು  ರೈಸಿನಾದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಕೊಂಡಾಡಿದ ನೇತಾನ್ಯಹು, ಯಾವುದೇ ದೇಶದ ಎಂತಹುದೇ ಸರ್ಕಾರವಿರಲು. ಆ  ಸರ್ಕಾರದ ಪ್ರಮುಖ ಆದ್ಯತೆ ತನ್ನ ದೇಶದ ಪ್ರಜೆಯ ರಕ್ಷಣೆಯಾಗಿರಬೇಕು.  ಇತಿಹಾಸದಲ್ಲಿ ಇಸ್ರೇಲ್ ಹೋರಾಟದಿಂದ ನಾನು ಸಾಕಷ್ಟು ಕಲಿತಿದ್ದೇನೆ, ಹೀಗಾಗಿ ಭಾರತಕ್ಕೇನು ಬೇಕು ಎಂಬುದರ ಸಣ್ಣ ಕಲ್ಪನೆ ನನಗಿದೆ. 
ರಕ್ಷಣಾ ಕ್ಷೇತ್ರದಲ್ಲಿ ಭಾರತದ ಅಭಿವೃದ್ಧಿ ಗಮನಾರ್ಹವಾಗಿದ್ದು, ಎಫ್-35 ಯುದ್ಧ ವಿಮಾನಗಳ ಅವಶ್ಯಕತೆ ಭಾರತಕ್ಕಿದೆ, ಅಂತೆಯೇ ಸೈಬರ್ ಭದ್ರತೆ ಕುರಿತೂ ಭಾರತ ಮತ್ತಷ್ಟು ಗಂಭೀರವಾಗಬೇಕಿದೆ. ನಮ್ಮ ಆರ್ಥಿಕ ಸಾಮರ್ಥ್ಯ  ವೃದ್ಧಿಯಾದರೆ ರಕ್ಷಣಾ ಸಾಮರ್ಥ್ಯಕೂಡ ವೃದ್ಧಿಯಾಗುತ್ತದೆ. ಭಾರತಕ್ಕೆ ಭೇಟಿ ನೀಡಿರುವ ಇಸ್ರೇಲ್ ನಾಯಕರ ಪೈಕಿ ನಾನು ಎರಡನೇ ನಾಯಕನಾಗಿದ್ದು, 2003ರಲ್ಲಿ ಅರಿಯಲ್ ಶಾರನ್ ಅವರು ಭೇಟಿ ನೀಡಿದ್ದರು. ಆದರೆ ಪ್ರಧಾನಿ  ಮೋದಿ 3 ಸಾವಿರ ವರ್ಷಗಳಲ್ಲಿ ಇಸ್ರೇಲ್ ಭೇಟಿ ನೀಡಿದ ಮೊದಲ ಭಾರತೀಯ ನಾಯಕರಾಗಿದ್ದಾರೆ ಎಂದು ಮೋದಿ ಅವರನ್ನು ಗುಣಗಾನ ಮಾಡಿದರು. 
ನಿಮಗೆ ಇಸ್ರೇಲ್ ದೇಶದ ಮೇಲೆ ಎಷ್ಟು ವಿಶ್ವಾಸವಿದೆಯೇ ಇಸ್ರೇಲ್ ಗೂ ಭಾರತದ ಮೇಲೆ ಅಷ್ಟೇ ವಿಶ್ವಾಸವಿದೆ. ನಮ್ಮ ಸೌಹಾರ್ಧ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುತ್ತಾ ನಮ್ಮ ಉಭಯ ದೇಶಗಳಲ್ಲಿನ ನಾಗರಿಕರನ್ನು  ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಶಾಲಿಗೊಳಿಸುವ ಕಾರ್ಯ ಮಾಡೋಣ ಎಂದು ನೇತಾನ್ಯಹು ಹೇಳಿದರು. 
ಇನ್ನು ನೇತಾನ್ಯಹು ಭಾಷಣದ ವೇಳೆ ಪ್ರಧಾನಿ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಇತರೆ ಅಧಿಕಾರಿಗಳು, ಕೇಂದ್ರ ಸಚಿವರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com