ರಾಮೇಶ್ವರಂ: ಕಟ್ಚಾತೀವ್ ಬಳಿ ಮೀನುಗಾರಿಕೆಯಲ್ಲಿ ತೊಡಗಿದ ಸುಮಾರು 3 ಸಾವಿರ ತಮಿಳುನಾಡಿನ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಓಡಿಸಿದೆ ಎಂದು ಮೀನುಗಾರರ ಸಂಘದ ಮುಖಂಡರು ಆರೋಪಿಸಿದ್ದಾರೆ.
564 ದೋಣಿಗಳಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯಲಾಗಿತ್ತು. ಮಧ್ಯರಾತ್ರಿ ವೇಳೆಯಲ್ಲಿ ಕಟ್ಚಾತೀವ್ ಬಳಿ ಬಂದ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಬಂದೂಕು ತೋರಿಸುವ ಮೂಲಕ ಅಲ್ಲಿಂದ ಓಡಿಸಿದ್ದಾರೆ ಎಂದು ತಮಿಳುನಾಡು ಯಾಂತ್ರಿಕೃತ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಪಿ, ಸೆಸುರಾಜ ಹೇಳಿದ್ದಾರೆ.
ಇದರಿಂದಾಗಿ ಮೀನು ಹಿಡಿಯದೆ ಮೀನುಗಾರರು ವಾಪಾಸ್ ಬರುವಂತಾಯಿತು. ಅಲ್ಲದೇ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ 20 ದೋಣಿಗಳ ನೆಟ್ ಗಳನ್ನು ಹರಿದುಹಾಕಿದ್ದಾರೆ . ತಮಿಳುನಾಡು ಮೀನುಗಾರರ ಮೇಲೆ ಪದೇ ಪದೇ ಇಂತಹ ದಾಳಿಯಾಗುತ್ತಿದ್ದು, ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಮೀನುಗಾರರ ಬಹು ದಿನಗಳ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
Advertisement