ಮುಂಬಯಿ: ಬೆಳೆ ಸಾಲ ಪಡೆಯಲು ಬಂದ ರೈತನ ಪತ್ನಿಯನ್ನು ಹಣಕಾಸು ಸಂಸ್ಥೆಯ ಅಧಿಕಾರಿ ‘ಹಾಸಿಗೆ’ಗೆ ಕರೆದ ಹೇಸಿಗೆ ಪ್ರಕರಣ ನಡೆದಿದೆ.
ಮಲ್ಕಾಪುರ ತಹಸೀಲ್ ವ್ಯಾಪ್ತಿಯ ದಾಟಲಾದಲ್ಲಿ ಈ ಪ್ರಕರಣ ನಡೆದಿದ್ದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿ ರಾಜೇಶ್ ಹಿವಸೆ ಮತ್ತು ಇಲಾಖೆಯ ಗುಮಾಸ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪತಿಯ ಜತೆಗೂಡಿ ಬಂದಿದ್ದ ಮಹಿಳೆಯಿಂದ ಅರ್ಜಿ ಹಾಗೂ ಅವರ ಸಂಪರ್ಕ ವಿವರ ಪಡೆದುಕೊಂಡ ಅಧಿಕಾರಿ, ಆ ಬಳಿಕ ಕರೆ ಮಾಡಿ ಸಾಲ ಮಂಜೂರಿಗೆ ಪ್ರತಿಯಾಗಿ ತಮ್ಮ ಲೈಂಗಿಕ ವಾಂಛೆ ಈಡೇರಿಸುವಂತೆ ಕೇಳಿಕೊಂಡಿದ್ದ. ಅದಾಗಿ, ಅಂತಿಮ ಸಮ್ಮತಿ ಪಡೆದು ಬರಲು ಮಹಿಳೆಯ ಬಳಿಗೆ ಗುಮಾಸ್ತನನ್ನೂ ಕಳಿಸಿಕೊಟ್ಟಿದ್ದ.
ರಾಜೇಶ್ ಮತ್ತು ಗುಮಾಸ್ತ ಇಬ್ಬರೂ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರ ಕಸರತ್ತು ಮುಂದುವರಿದಿದೆ.
ಅಧಿಕಾರಿ ಜತೆಗಿನ ದೂರವಾಣಿ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಮಹಿಳೆ, ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದ್ದರು.