ಲಖನೌ: ನಾನೊಬ್ಬ ಧರ್ಮನಿಷ್ಠ ಹಿಂದು, ನಾನೇಕೆ ಈದ್ ಹಬ್ಬವನ್ನು ಆಚರಿಸಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಅವರು, ನಾನೊಬ್ಬ ಧರ್ಮನಿಷ್ಠ ಹಿಂದೂ ಆಗಿದ್ದು, ನಾನು ಈದ್ ಹಬ್ಬವನ್ನು ಆಚರಿಸುವುದಿಲ್ಲ. ನನ್ನ ಸ್ವಂತ ಧರ್ಮದಲ್ಲಿ ನಾನು ಹೆಮ್ಮೆ ಪಡುತ್ತೇನೆ... ಇಷ್ಟಕ್ಕೂ ನಾನೇಕೆ ಈದ್ ಆಚರಿಸಬೇಕು ಎಂದು ಹೇಳಿದ್ದಾರೆ.
ನಾನು ನನ್ನ ಸ್ವಂತ ಧರ್ಮದಲ್ಲಿ ಹೆಮ್ಮೆ ಪಡುವ ವ್ಯಕ್ತಿ. ಜನಿವಾರ ಹಾಕಿಕೊಂಡು ಅದೇ ಸಂದರ್ಭದಲ್ಲಿ ಮುಸ್ಲಿಮರ ಟೋಪಿ ಧರಿಸಿ, ಕೆಳಗೆ ಮಂಡಿಯೂರಿ ಪ್ರಾರ್ಥನೆ ಮಾಡುವ ವ್ಯಕ್ತಿ ನಾನಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅಖಿಲೇಶ್ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕೆಂಪು ಬಾವುಟಗಳನ್ನು ನಿಶ್ಯಕ್ತೀಕರಣಗೊಳಿಸಿದ ಬಳಿಕ, ಬಿಜೆಪಿ ಇದೀಗ ಸಮಾಜವಾದಿ ಪಕ್ಷದ ಸದಸ್ಯರು ಧರಿಸುತ್ತಿರುವ ಕೆಂಪು ಟೋಪಿಗಳನ್ನು ಕೆಳಗಿಳಿಸುವತ್ತ ಕೆಲಸ ಮಾಡುತ್ತಿದೆ ಎಂದಿದ್ದಾರೆ.