ಭೀಮಾ ಕೊರೇಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಕ್ಬೋಟೆ ನಿರೀಕ್ಷಣಾ ಜಾಮೀನು ನೀಡುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಈ ಕುರಿತ ಅರ್ಜಿಯನ್ನು ಇಂದು ಪರಿಶೀಲನೆ ನಡೆಸಿದ್ದ ಸುಪ್ರೀಂಕೋರ್ಟ್, ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಇದರ ಬೆನ್ನಲ್ಲೇ ಇದೀಗ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮಿಲಿಂದ್ ಎಕ್ಬೋಟೆಯನ್ನು ಪುಣೆಯ ಶಿವಾಜಿನಗರದಲ್ಲಿರುವ ಆತನ ನಿವಾಸದಲ್ಲಿಯೇ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಭೀಮಾ ಕೋರೆಗಾಂವ್ ಯುದ್ಧದಲ್ಲಿ ದಲಿತರನ್ನು ಒಳಗೊಂಡ ಬ್ರಿಟಿಷ್ ಸೇನೆಯು ಮೇಲ್ಜಾತಿಯವರನ್ನು ಒಳಗೊಂಡ ಪೇಶ್ವೆ ಸೇನೆಯನ್ನು ಸೋಲಿಸಿದ ಸ್ಮರಣಾರ್ಥ ಜ.1 ರಂದು ಆಯೋಜಿಸಿದ್ದ 200ನೇ ವಿಜಯೋತ್ಸವದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೊಳಗಾಗಿತ್ತು.
ಪ್ರಕರಣ ಸಂಬಂಧ ಪುಣೆ ಪೊಲೀಸರು ಎಕ್ಬೋಟೆ ಹಾಗೂ ಮತ್ತೊಬ್ಬ ನಾಯಕ ಸಂಭಜಿ ಭಿಡೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಘಟನೆ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ವಿರೋಧ ಪಕ್ಷಗಳು ಗಂಭೀರ ಆರೋಪಗಳನ್ನು ಮಾಡಿದ್ದವು. ಹಿಂಸಾಚಾರದ ಬಳಿಕವೂ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಮಿಲಿಂದ್ ಎಕ್ಬೋಬೆ ಹಾಗೂ ಎಕ್ತಾ ಅಘಾದಿಯವರನ್ನು ಫಡ್ನವೀಸ್ ಸ್ವತಂತ್ರರಾಗಿ ಓಡಾಡುವಂತೆ ಮಾಡಿದ್ದಾರೆಂದು ಆರೋಪ ಮಾಡಿದ್ದವು.