ಕೋಲ್ಕತ್ತಾ: ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳ ಒಕ್ಕೂಟದ ಉದ್ದೇಶದ ಭಾಗವಾಗಿ ಇಬ್ಬರೂ ಮುಖ್ಯಮಂತ್ರಿಗಳು ಇಂದು ಭೇಟಿ ಮಾಡಿ ಚರ್ಚಿಸಿದ್ದಾರೆ.
ಮಮತಾ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, ದೇಶದಲ್ಲಿ ಪರ್ಯಾಯ ಅಜೆಂಡಾ ಮತ್ತು ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯ ಇದೆ ಹೇಳಿದ್ದಾರೆ.
ದೇಶ ಏನಾದರೂ ಒಳ್ಳೆಯದು ಮಾಡುವವರನ್ನು ಬಯಸುತ್ತಿದೆ. ಬಿಜೆಪಿ ಹೋಗಿ ಕಾಂಗ್ರೆಸ್ ಬಂದರೆ ಏನಾಗುತ್ತೆ? ಏನು ಆಗಲ್ಲ. ಹೀಗಾಗಿ ಸಾಮನ ಮನಸ್ಕರು ಒಂದಾಗಿ ತೃತೀಯ ರಂಗ ರಚನೆ ಬಗ್ಗೆ ಚರ್ಚಿಸಿದ್ದೇವೆ. ಇದು ಬೀರ ಆರಂಭ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಹೇಳಿದ್ದಾರೆ.
ಇತ್ತೀಚಿಗೆ ಕೆಸಿಆರ್ ಅವರು ತೃತೀಯ ರಂಗ ರಚನೆಯ ಪ್ರಸ್ತಾಪ ಮಾಡಿದಾಗ ಮೊದಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬೆಂಬಲ ಸೂಚಿಸಿದ್ದರು. ಹೀಗಾಗಿ ಕೆಸಿಆರ್ ಅವರು ಇಂದು ದೀದಿಯನ್ನು ಭೇಟಿ ಮಾಡಿದ್ದಾರೆ.
2019 ರ ಲೋಕಸಭಾ ಚುನಾವಣೆಗೆ ಈಗಾಗಲೇ ಪ್ರತಿಪಕ್ಷಗಳು ತಯಾರಿ ನಡೆಸಿದ್ದು ಮೋದಿ, ಬಿಜೆಪಿಯ ಗೆಲುವಿನ ನಾಗಾಲೋಟವನ್ನು ತಡೆಯುವುದಕ್ಕೆ ರಣತಂತ್ರ ಹೆಣೆಯುತ್ತಿವೆ.