38 ಭಾರತೀಯರ ಮೃತದೇಹಗಳನ್ನು ಮರಳಿ ತರಲು ಮೊಸುಲ್'ಗೆ ತೆರಳುತ್ತಿದ್ದೇನೆ: ವಿ.ಕೆ. ಸಿಂಗ್

38 ಭಾರತೀಯರ ಮೃತದೇಹಗಳನ್ನು ಭಾರತಕ್ಕೆ ಮರಳಿ ತರಲು ಇರಾಕ್'ಗೆ ತೆರಳುತ್ತಿದ್ದೇನೆಂದು ವಿದೇಶಾಂಗ ಖಾತೆಗಳ ರಾಜ್ಯ ಸಚಿವ ವಿ.ಕೆ .ಸಿಂಗ್ ಅವರು ಭಾನುವಾರ ಹೇಳಿದ್ದಾರೆ...
ವಿದೇಶಾಂಗ ಖಾತೆಗಳ ರಾಜ್ಯ ಸಚಿವ ವಿ.ಕೆ .ಸಿಂಗ್
ವಿದೇಶಾಂಗ ಖಾತೆಗಳ ರಾಜ್ಯ ಸಚಿವ ವಿ.ಕೆ .ಸಿಂಗ್
ನವದೆಹಲಿ: 38 ಭಾರತೀಯರ ಮೃತದೇಹಗಳನ್ನು ಭಾರತಕ್ಕೆ ಮರಳಿ ತರಲು ಇರಾಕ್'ಗೆ ತೆರಳುತ್ತಿದ್ದೇನೆಂದು ವಿದೇಶಾಂಗ ಖಾತೆಗಳ ರಾಜ್ಯ ಸಚಿವ ವಿ.ಕೆ .ಸಿಂಗ್ ಅವರು ಭಾನುವಾರ ಹೇಳಿದ್ದಾರೆ. 
ಇರಾಕ್ ತೆರಳುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 38 ಭಾರತೀಯರ ಮೃತದೇಹಗಳನ್ನು ಮರಳಿ ತರಲು ಮೊಸುಲ್'ಗೆ ತೆರಳುತ್ತಿದ್ದೇನೆ. ಮತ್ತೊಬ್ಬ ಭಾರತೀಯನ ಮೃತದೇಹದ ಡಿಎನ್ಎ ಪರೀಕ್ಷೆ ಪ್ರಗತಿಯಲ್ಲಿದೆ. ಹೀಗಾಗಿ ಓರ್ವ ಭಾರತೀಯನ ಮೃತದೇಹವನ್ನು ಮರಳಿ ತರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. 
38 ಭಾರತೀಯರ ಮೃತದೇಹಗಳನ್ನು ಭಾರತಕ್ಕೆ ಮರಳಿ ತರುತ್ತಿದ್ದಂತೆಯೇ ಯಾವುದೇ ಸಂಶಯಗಳು ಬರಬಾರದೆಂದು ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳ ಮೂಲಕ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗುತ್ತದೆ. ಮೃತರ ಕುಟುಂಬಸ್ಥರ ಕುರಿತಂತೆ ತೀವ್ರ ಸಂತಾಪವನ್ನು ಸೂಚಿಸುತ್ತೇನೆಂದು ತಿಳಿಸಿದ್ದಾರೆ. 
ಇರಾಕ್'ನ ಎರಡನೇ ಅತ್ಯಂತ ದೊಡ್ಡ ನಗರವಾದ ಮೊಸುಲ್ ಅನ್ನು ಇಸಿಸ್ ಉಗ್ರರು 2014ರಲ್ಲಿ ವಶಕ್ಕೆ ಪಡೆದಿದ್ದರು. ಭಾರತದ 40 ಕಾರ್ಮಿಕರ ತಂಡವನ್ನು ಈ ಉಗ್ರರು ಆಗ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಇವರಲ್ಲಿ ಹೆಚ್ಚಿನವರು ಪಂಜಾಬ್ ರಾಜ್ಯ ಮೂಲದವರಾಗಿದ್ದಾರೆ. 
ಅವರ ಪೈಕಿ ಗುರ್ದಾಸ್ಪುರದ ಹರ್'ಜೀತ್ ಮಸೀಹ್ ಉಗ್ರರಿಂದ ತಪ್ಪಿಸಿಕೊಂಡು ಭಾರತಕ್ಕೆ ಮರಳಿದ್ದರು. ಉಳಿದ ಎಲ್ಲರನ್ನೂ ಉಗ್ರರು ಹತ್ಯೆ ಮಾಡುವುದನ್ನು ನಾನು ನೋಡಿದ್ದೇನೆಂದು ಹೇಳಿಕೆ ನೀಡಿದ್ದರು. ಆದರೆ, ಭಾರತ ಸರ್ಕಾರ ಇದನ್ನು ಅಲ್ಲಗೆಳೆದಿತ್ತು. ಮಸೀಹ್ ಹೇಳುತ್ತಿರುವುದು ಕಟ್ಟು ಕತೆ. ತಾನು ಬಾಂಗ್ಲಾದೇಶ ಮುಸ್ಲಿಂ ಎಂದು ಸುಳ್ಳು ಹೇಳಿ ಮಸೀಹ್ ತಪ್ಪಿಸಿಕೊಂಡಿದ್ದರು ಎಂದು ಸುಷ್ಮಾ ಪ್ರತಿಕ್ರಿಯೆ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com