ಬೆಂಗಳೂರಿನ ಹೃದಯ ಕೋಲ್ಕತ್ತಾದಲ್ಲಿ ಮಿಡಿಯಿತು!

ಮೆದುಳು ನಿಷ್ಕ್ರಿಯಗೊಂಡಿದ್ದ ರೋಗಿಯೊಬ್ಬನ ಹೃದಯವನ್ನು ಬೆಂಗಳೂರಿನಿಂದ ಕೋಲ್ಕತ್ತಾಗೆ ಯಶಸ್ವಿಯಾಗಿ ಸಾಗಿಸಲಾಗಿದೆ.
ಜಾರ್ಖಂಡ್ ರೋಗಿಗೆ  ಹೃದಯ ಕಸಿ ನಡೆಸುತ್ತಿರುವ ದೃಶ್ಯ
ಜಾರ್ಖಂಡ್ ರೋಗಿಗೆ ಹೃದಯ ಕಸಿ ನಡೆಸುತ್ತಿರುವ ದೃಶ್ಯ
ಕೋಲ್ಕತ್ತಾ: ಮೆದುಳು ನಿಷ್ಕ್ರಿಯಗೊಂಡಿದ್ದ ರೋಗಿಯೊಬ್ಬನ ಹೃದಯವನ್ನು ಬೆಂಗಳೂರಿನಿಂದ ಕೋಲ್ಕತ್ತಾಗೆ ಯಶಸ್ವಿಯಾಗಿ ಸಾಗಿಸಲಾಗಿದೆ. 
ಇದು ಪೂರ್ವ ಭಾರತದಲ್ಲಿ ನಡೆಯುತ್ತಿರುವ ಪ್ರಪ್ರಥಮ ಹೃದಯಕಸಿ ಚಿಕಿತ್ಸೆ ಆಗಿದ್ದು ಚೆನ್ನೈ ಮೂಲದ ವೈದ್ಯರು ಈ ಹೃದಯಕಸಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ.  ಬೆಂಗಳೂರಿನಿಂದ ಗ್ರೀನ್ ಕಾರಿಡಾರ್ ಮೂಲಕ ಸಾಗಿಸಲಾದ ಹೃದಯವನ್ನು ಜಾರ್ಖಂಡ್ ಮೂಲದ ರೋಗಿಗೆ ಕಸಿ ಮಾಡಲಾಗಿದೆ.
ಭಾನುವಾರ ನಡೆದ ಅಪಘಾತವೊಂದರಲ್ಲಿ ಬೆಂಗಳೂರಿನ ವರುಣ್ ಡಿಕೆ ಗಂಭೀರವಾಗಿ ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೊಷಿಸಿದರು. ಇದೇ ವೇಳೆ ಜಾರ್ಖಂಡ್ ನಿವಾಸಿಯಾಗಿದ್ದ ದಿಲ್ ಚಂದ್ ಸಿಂಗ್ ಕೋಲ್ಕತ್ತಾ ಆಸ್ಪತ್ರೆಗೆ ದಾಖಲಾಗಿದ್ದರು.
ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿ ಹೃದಯ ಸ್ನಾಯುಗಳ ದುರ್ಬಲತೆಯಿಂದ ಬಳಲುತ್ತಿದ್ದ ಅವರಿಗೆ ಹೃದಯಕ್ಕೆ ಆಮ್ಲಜನಕ ಕೊರತೆ ಉಂಟಾಗಿತ್ತು  ಮತ್ತು ರಕ್ತ ಪರಿಚಲನೆ ನಿಂತು ಹೋಗಿತ್ತು. 
ಆಗ ರೋಗಿ ಹಾಗೂ ದಾನಿಯ ಸಂಬಂಧಿಕರು ಸಂಪರ್ಕಿಸಲ್ಪಟ್ಟರು. ಅವರು ಪಶ್ಚಿಮ ಬಂಗಾಳ ಹಾಗೂ ಕರ್ನಾಟಕ ಸರ್ಕಾರಗಳಿಗೆ ಮನವಿ ಸಲ್ಲಿಸಿ ಡಾ. ತಪಸ್ ರಾಯ್ ಚೌಧರಿ ನೇತೃತ್ವದ ಆರು ಸದಸ್ಯರ ವೈದ್ಯರ ತಂಡದೊಡನೆ ಬೆಂಗಳೂರಿಗನ ಹೃದಯವನ್ನು ಕೋಲ್ಕತ್ತಾಗೆ ಸಾಗಿಸಿದೆ.
ಕೋಲ್ಕತ್ತಾ ಪೋಲೀಸರು ಸುಮಾರು 15 ಕಿ.ಮೀ. ಉದ್ದದ ಹಸಿರು ಕಾರಿಡಾರ್ ನಿರ್ಮಾಣಕ್ಕೆ ಅವಕಾಸ ಕಲ್ಪಿಸಿಕೊಟ್ಟಿದ್ದರು. 18 ನಿಮಿಷಗಳಲ್ಲಿ ಹೃದಯವನ್ನು ರೋಗಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಮುಂದಿನ ಕೆಲವೇ ಗಂಟೆಗಳಲ್ಲಿ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಲಾಯಿತು.
ಇನ್ನು ಇದಕ್ಕೆ ಮುನ್ನ ಚೆನ್ನೈ, ಮುಂಬೈ ಮತ್ತು ದೆಹಲಿಯಲ್ಲಿ ಇಂತಹಾ ಹೃದಯಕಸಿ ನಡೆದಿತ್ತು. ಕೋಲ್ಕತ್ತಾ ಮತ್ತು ಪೂರ್ವ ಭಾರತಕ್ಕೆ ಅಂತಹ ಪ್ರಯತ್ನ ಇದೇ ಮೊದಲ ಬಾರಿಯದಾಗಿದೆ.
 "ನಗರದಲ್ಲಿ ಮೊದಲ ಬಾರಿಗೆ ಇಂತಹಾ ಶಸ್ತ್ರಚಿಕಿತ್ಸೆ ನಡೆದಿದೆ.ಪಶ್ಚಿಮ ಬಂಗಾಳದಲ್ಲಿ ಸುಮಾರು 35,000 ಮಂದಿಗೆ ಹೃದಯ ಕಸಿ ಅಗತ್ಯವಾಗಿದೆ. ಆದರೆ ದಾನಿಗಳನ್ನು ಹುಡುಕುವುದು ಕಷ್ಟ. ಹೀಗಾಗಿ ಜನರು ಅಂಗಾಂಗ ದಾನಕ್ಕೆ ಹೆಚ್ಚು ಮನ ಮಾಡಬೇಕಿದೆ. ಒಬ್ಬ ವ್ಯಕ್ತಿಯ ಒಂಭತ್ತು ಅಂಗಗಳನ್ನು ದಾನ ಮಾಡಬಹುದು. ಆ ಮೂಲಕ ಒಂಭತ್ತು ಜನರಿಗೆ ಹೊಸ ಜೀವನ ನಿಡಬಹುದು" ಶಸ್ತ್ರಚಿಕಿತ್ಸೆ ಯಶಸ್ಸಿನ ಬಳಿಕ ಮಾತನಾಡಿದ ಡಾ. ರಾಯ್ ಚೌಧರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com