ನವದೆಹಲಿ: ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಪಟ್ಟಂತೆ ಹೊಸದೊಂದು ಹಿಂಸಾಚಾರ ದೆಹಲಿಯಲ್ಲಿ ಆರಂಭವಾಗಿದ್ದು, ಈಶಾನ್ಯ ದೆಹಲಿಯ ಸೀಲಾಂಪುರ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಬಸ್ಸುಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ತೊಂದರೆ ಮಾಡಿದ್ದಾರೆ.
ಪ್ರತಿಭಟನಾಕಾರರು ಜಫ್ರಬಾದ್ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಪೊಲೀಸರು ಅಶ್ರುವಾಯು ಸಿಡಿಸಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರಿಗೆ ಸುಮಾರು 4 ಗಂಟೆ ಹಿಡಿಯಿತು. ನಿನ್ನೆ ಸಾಯಂಕಾಲ ಈ ಘಟನೆ ನಡೆದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ದೆಹಲಿ ಪೊಲೀಸ್ ಹೆಚ್ಚುವರಿ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಲ್ ಮಿತ್ತಲ್, ಸಾಮೂಹಿಕ ದಾಳಿಯಲ್ಲಿ 18 ಮಂದಿಗೆ ಗಾಯವಾಗಿದೆ. ಅವರಲ್ಲಿ 11 ಮಂದಿ ಪೊಲೀಸ್ ಸಿಬ್ಬಂದಿ. ಸೀಲಾಂಪುರ್ ಮತ್ತು ಜಫ್ರಾಬಾದ್ ಪೊಲೀಸ್ ಠಾಣೆಗಳಲ್ಲಿ ಗಲಭೆಗೆ ಸಂಬಂಧಪಟ್ಟಂತೆ ಎರಡು ಕೇಸುಗಳು ದಾಖಲಾಗಿದ್ದು ಸಾರ್ವಜನಿಕ ಸೇವೆಯಲ್ಲಿರುವವರು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿದ್ದಾರೆ ಎಂದರು.
ನಿನ್ನೆ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಕೆಲವು ಸಮಾಜ ವಿರೋಧಿ ಶಕ್ತಿಗಳು ಪೊಲೀಸರನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಿದರು. ನಾವು ಅಶ್ರುವಾಯು ಪ್ರಯೋಗಿಸಿದೆವು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಎರಡು ಬಸ್ಸುಗಳು, ಮೂರು ಬೈಕ್ ಮತ್ತು ಎರಡು ಪೊಲೀಸ್ ಬೂತ್ ಗಳು ಹಾನಿಗೀಡಾಗಿವೆ.
ನಗರದ ಉಳಿದ ಕಡೆಗಳಲ್ಲಿ ನಿನ್ನೆ ಪ್ರತಿಭಟನೆ ಮುಂದುವರಿದಿತ್ತು. ಮುಸಲ್ಮಾನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ವ್ಯಾಪಾರಿಗಳು ಮತ್ತು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದ್ದವು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಹತ್ತಿರ ಕೂಡ ಪ್ರತಿಭಟನೆ ಮುಂದುವರಿದಿತ್ತು.
Advertisement